ಹಾವೇರಿ: ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅಭಿಪ್ರಾಯಪಟ್ಟರು.
‘ಸಮರ್ಪಣ ಹಾವೇರಿ’ ತಂಡದ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಶನಿವಾರ ಏರ್ಪಡಿಸಿದ್ದ ಅಂತರ್ಜಾಲ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈವರೆಗೆ ಜಾರಿಯಲ್ಲಿದ್ದ ಮೆಕಾಲೆ ಶಿಕ್ಷಣ ನೀತಿಗೆ ತಿಲಾಂಜಲಿ ನೀಡಿ ಭಾರತೀಯತೆಯನ್ನು ಹಾಗೂ ದೇಶದ ಅತ್ಯಮೂಲ್ಯ ಇತಿಹಾಸವನ್ನು ಸಾರುವಂತಹ ಹಾಗೂ ಭಾರತದ ನೆಲದ ಸೊಗಡಿನ ಆಧಾರದ ಮೇಲೆ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸುವಂತಹ ವ್ಯವಸ್ಥೆ ಇದಾಗಿದೆ ಎಂದು ಹೇಳಿದರು.
ಇಲ್ಲಿಯವರೆಗೆ ಶಿಕ್ಷಣ ಕಲಿಯುವುದೆಂದರೆ ಕೇವಲ ಉದ್ಯೋಗ ಪಡೆಯಲು ಇರುವ ಅಸ್ತ್ರ ಎಂದು ಮಾತ್ರ ಭಾವಿಸಲಾಗುತ್ತಿತ್ತು. ಆದರೆ ನಮ್ಮ ಶಿಕ್ಷಣದ ವ್ಯವಸ್ಥೆಯ ಗುರಿ ಕೇವಲ ಉದ್ಯೋಗ ಪಡೆಯುವುದು ಮಾತ್ರವಲ್ಲ, ಶಿಕ್ಷಣದಿಂದ ಪಡೆದಂತಹ ಜ್ಞಾನವನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಇರುವಂತಹ ಸಾಧನ ಎಂದು ಭಾವಿಸಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ 5+3+3+4 ವ್ಯವಸ್ಥೆ ಜಾರಿಗೆ ಬರಲಿದೆ. ಈ ವ್ಯವಸ್ಥೆಯಿಂದ ದೇಸಿ ಕೌಶಲವನ್ನು ಅಭಿವೃದ್ಧಿ ಪಡಿಸಲು ಸಾಧ್ಯ. ವಿದ್ಯಾರ್ಥಿಯು ತನ್ನ ಇಚ್ಛೆಗೆ ಅನುಗುಣವಾಗಿ ಶಿಕ್ಷಣವನ್ನು ಆಯ್ದುಕೊಳ್ಳಬಹುದು ಎಂದರು.
ನಂತರ ಪ್ರಶ್ನೋತ್ತರ ಅವಧಿಯಲ್ಲಿ ವಿವಿಧ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಜ್ಞಾ ಪ್ರವಾಹದ ಪ್ರಾಂತ ಸಹ ಸಂಯೋಜಕರಾದ ನಿರಂಜನ್ ಪೂಜಾರ ಸಮರ್ಪಣ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮರ್ಪಣಾ ತಂಡದ ಡಾ.ಸಂತೋಷ ಆಲದಕಟ್ಟಿ, ವೀರೇಶ ಮತ್ತಿಹಳ್ಳಿ, ಜೆ.ಸಿ ಹಿರೇಮಠ್, ಮಲ್ಲಪ್ಪ ಕರೆಣ್ನನವರ, ರಾಜು ಬಿ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ಉಪನ್ಯಾಸಕರು ಹಾಗೂ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.