ADVERTISEMENT

ಮಳೆ ಕಾರಣದಿಂದ ಹಾವೇರಿಯಲ್ಲಿ ಒಂದೇ ದಿನ 318 ಮನೆಗಳಿಗೆ ಹಾನಿ

ನಿರಂತರ ಮಳೆಗೆ ಕೃಷಿ ಬೆಳೆ ಜಲಾವೃತ: 23 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 14:52 IST
Last Updated 21 ಮೇ 2022, 14:52 IST
ನಿರಂತರವಾಗಿ ಸುರಿದ ಅತಿವೃಷ್ಟಿಯಿಂದ ಹಾವೇರಿ ತಾಲ್ಲೂಕಿನ ಕೋಳೂರು ಗ್ರಾಮದ ಸಮೀಪ ವರದಾ ನದಿ ಮೈದುಂಬಿ ಹರಿಯುತ್ತಿದ್ದು, ಸೇತುವೆ ಮುಳುಗಡೆಯಾಗಿರುವ ದೃಶ್ಯ 
ನಿರಂತರವಾಗಿ ಸುರಿದ ಅತಿವೃಷ್ಟಿಯಿಂದ ಹಾವೇರಿ ತಾಲ್ಲೂಕಿನ ಕೋಳೂರು ಗ್ರಾಮದ ಸಮೀಪ ವರದಾ ನದಿ ಮೈದುಂಬಿ ಹರಿಯುತ್ತಿದ್ದು, ಸೇತುವೆ ಮುಳುಗಡೆಯಾಗಿರುವ ದೃಶ್ಯ    

ಹಾವೇರಿ: ಎರಡು ಮೂರು ದಿನಗಳಿಂದ ಸುರಿದ ಜಿಟಿಜಿಟಿ ಮಳೆಯಿಂದ ಜಿಲ್ಲೆಯಾದ್ಯಂತ ಶನಿವಾರ ಒಂದೇ ದಿನ 318 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಹಾವೇರಿ–117, ರಾಣೆಬೆನ್ನೂರು–56, ಬ್ಯಾಡಗಿ–66, ಹಿರೇಕೆರೂರು–4, ರಟ್ಟೀಹಳ್ಳಿ–11, ಸವಣೂರು–22, ಶಿಗ್ಗಾವಿ–19, ಹಾನಗಲ್‌ ತಾಲ್ಲೂಕಿನಲ್ಲಿ 23 ಮನೆಗಳು ಭಾಗಶಃ ಶಿಥಿಲಗೊಂಡಿವೆ. ಚಾವಣಿ ಮತ್ತು ಗೋಡೆ ಹಾನಿಯಾದ ಮನೆಗಳ ಸಂತ್ರಸ್ತರು ದವಸ, ಧಾನ್ಯ, ಪಾತ್ರೆ, ಬಟ್ಟೆಗಳನ್ನು ರಕ್ಷಣೆ ಮಾಡಿಕೊಳ್ಳಲು ಪರದಾಡಿದರು. ಕೆಲವು ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ, ಕುಟುಂಬಸ್ಥರು ಅತಂಕಕ್ಕೆ ಒಳಗಾಗಿದ್ದರು.

ಗುರುವಾರ ಮತ್ತು ಶುಕ್ರವಾರ ಹಗಲು–ರಾತ್ರಿ ಸುರಿದ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಶನಿವಾರ ಬೆಳಿಗ್ಗೆಯಿಂದ ಮಳೆ ಸ್ವಲ್ಪ ವಿರಾಮ ನೀಡಿದ ಪರಿಣಾಮ ವ್ಯಾಪಾರ ವಹಿವಾಟು ಎಂದಿನಂತೆಯೇ ನಡೆಯಿತು. ವಾಹನ ಸಂಚಾರ ಹಾವೇರಿ ನಗರದಲ್ಲಿ ಹೆಚ್ಚಾಗಿ ಕಂಡುಬಂದಿತು. ಗ್ರಾಮೀಣ ಜನರು ಕೆಲಸ ಕಾರ್ಯಗಳಿಗೆ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

ADVERTISEMENT

ಹಾವೇರಿ ತಾಲ್ಲೂಕಿನಲ್ಲಿ 17 ಹೆಕ್ಟೇರ್‌, ರಾಣೆಬೆನ್ನೂರಿನಲ್ಲಿ 1.65 ಹೆಕ್ಟೇರ್‌ ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ 5 ಹೆಕ್ಟೇರ್‌ ತೋಟಗಾರಿಕೆ ಬೆಳೆ ನಾಶವಾಗಿದೆ.

ಕಳೆದ ಒಂದು ವಾರದಿಂದ (ಮೇ 15ರಿಂದ ಮೇ 21) ಸುರಿದ ಅತಿವೃಷ್ಟಿಗೆ 370 ಹೆಕ್ಟೇರ್‌ ಕೃಷಿ ಬೆಳೆ ಮತ್ತು 193ಹೆಕ್ಟೇರ್‌ ತೋಟಗಾರಿಕಾ ಬೆಳೆ ಜಲಾವೃತಗೊಂಡು ಹಾನಿಯಾಗಿದೆ. ಜಿಲ್ಲೆಯಾದ್ಯಂತ 579 ಮನೆಗಳು ಭಾಗಶಃ ಶಿಥಿಲಗೊಂಡಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.