ADVERTISEMENT

ರಟ್ಟೀಹಳ್ಳಿ | ಆಧಾರ್ ಸೇವಾ ಕೇಂದ್ರ ಸ್ಥಗಿತ: ಸಾರ್ವಜನಿಕರ ಪರದಾಟ

ಪ್ರದೀಪ ಕುಲಕರ್ಣಿ
Published 24 ನವೆಂಬರ್ 2025, 4:08 IST
Last Updated 24 ನವೆಂಬರ್ 2025, 4:08 IST
ರಟ್ಟೀಹಳ್ಳಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಸೇವಾ ಕೇಂದ್ರ ಈಗ ಬಂದ್ ಆಗಿದೆ
ರಟ್ಟೀಹಳ್ಳಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಸೇವಾ ಕೇಂದ್ರ ಈಗ ಬಂದ್ ಆಗಿದೆ   

ರಟ್ಟೀಹಳ್ಳಿ: ನೂತನ ತಾಲ್ಲೂಕು ಕೇಂದ್ರವಾಗಿ ಹಲವು ವರ್ಷ ಕಳೆದರೂ ರಟ್ಟೀಹಳ್ಳಿ ಪಟ್ಟಣ ಹಾಗೂ ತಾಲ್ಲೂಕು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ತಾಲ್ಲೂಕಿನ ಜನರ ಅನುಕೂಲಕ್ಕಾಗಿ ತೆರೆದಿದ್ದ ಆಧಾರ್ ಸೇವಾ ಕೇಂದ್ರಗಳು ಬಂದ್ ಆಗಿದ್ದು, ಆಧಾರ್ ನವೀಕರಣ ಹಾಗೂ ತಿದ್ದುಪಡಿಗಾಗಿ ಜನರು ಪರದಾಡುತ್ತಿದ್ದಾರೆ.

ತಾಲ್ಲೂಕು ಕೇಂದ್ರ ರಟ್ಟೀಹಳ್ಳಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕಳೆದ ನಾಲ್ಕೈದು ತಿಂಗಳಿನಿಂದ ಆಧಾರ್ ಸೇವಾ ಕೇಂದ್ರಗಳು ಬಂದ್ ಆಗಿದ್ದು, ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಪಟ್ಟಣದ ತಹಶೀಲ್ದಾರ್ ಕಚೇರಿ ಹಾಗೂ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಎರಡು ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳು ಈಗ ಬಂದ್ ಆಗಿದ್ದು, ಯಾವ ಕಾರಣಕ್ಕೆ ಬಂದ್ ಆಗಿವೆ ಎಂಬ ಮಾಹಿತಿಯೂ ಲಭ್ಯವಾಗುತ್ತಿಲ್ಲ.

ADVERTISEMENT

ಬ್ಯಾಂಕ್ ಖಾತೆ, ನೇರ ನಗದು ವರ್ಗಾವಣೆ ಸೇರಿದಂತೆ ಸರ್ಕಾರದ ಪ್ರತಿಯೊಂದು ಯೋಜನೆಯ ಲಾಭ ಪಡೆಯಲು ಆಧಾರ್ ಕಡ್ಡಾಯ ಮಾಡಲಾಗಿದೆ. ಆದರೆ, ಗ್ರಾಮೀಣ ಜನರು ಹೆಚ್ಚಿರುವ ತಾಲ್ಲೂಕಿನಲ್ಲಿ ಹಲವರ ಆಧಾರ್ ಕಾರ್ಡ್‌ಗಳಲ್ಲಿ ಸಾಕಷ್ಟು ಲೋಪಗಳಿವೆ. ವಯಸ್ಸು, ಫೋಟೊ, ಹೆಬ್ಬಟ್ಟು, ಕಣ್ಣು... ಹೀಗೆ ನಾನಾ ಸಮಸ್ಯೆಗಳಿವೆ. ಇವುಗಳನ್ನು ನಿವಾರಣೆ ಮಾಡಿಕೊಂಡು ಹೊಸ ಆಧಾರ್ ಕಾರ್ಡ್ ಪಡೆಯಲು ಸೇವಾ ಕೇಂದ್ರಗಳು ನೆರವಾಗಿದ್ದವು. ಆದರೆ, ಈ ಕೇಂದ್ರಗಳೇ ಬಂದ್ ಆಗಿರುವುದರಿಂದ ಜನರು ಪರಿತಪಿಸುತ್ತಿದ್ದಾರೆ.

ರಟ್ಟೀಹಳ್ಳಿ ತಾಲ್ಲೂಕಿನ 19 ಗ್ರಾಮ ಪಂಚಾಯಿತಿ ಒಳಗೊಂಡಂತೆ 63 ಗ್ರಾಮಗಳ ಜನತೆಯು ಪ್ರತಿಯೊಂದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಮಕ್ಕಳ ಶೈಕ್ಷಣಿಕ ದಾಖಲಾತಿಗೆ, ಶಕ್ತಿ ಯೋಜನೆಯಡಿ ಹೆಣ್ಣು ಮಕ್ಕಳು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಆಧಾರ್ ಬೇಕು.

ಮಹಿಳೆಯರ ಮನಸ್ವಿನಿ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ ಮಂಜೂರಾತಿ, ವಿಕಲಚೇತನ ಅಂಗವಿಕಲರ ಪ್ರಮಾಣ ಪತ್ರ ಪಡೆಯಲು, ವೈದ್ಯಕೀಯ ಸೌಲಭ್ಯ ಪಡೆಯಲು ಸೇರಿದಂತೆ ಮುಂತಾದ ಸೌಲಭ್ಯಗಳಿಗೆ ಆಧಾರ್ ಕಡ್ಡಾಯವಿದೆ.

ರಟ್ಟೀಹಳ್ಳಿ ಪಟ್ಟಣ ಹಾಗೂ ತಾಲ್ಲೂಕಿನ ಹಳ್ಳಿಗಳ ಜನರು, ಆಧಾರ್ ನವೀಕರಣ ಹಾಗೂ ತಿದ್ದುಪಡಿ ಮಾಡಿಸಲು ಎರಡು ಆಧಾರ್‌ ಕೇಂದ್ರಗಳಿಗೆ ಬರುತ್ತಿದ್ದರು. ಆದರೆ, ಈಗ ಕೇಂದ್ರಗಳು ಬಂದ್ ಆಗಿವೆ. ಇದರಿಂದ ಪಕ್ಕದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾದ ಅನಿವಾರ್ಯ ಎದುರಾಗಿದೆ.

ಹೊಸ ತಾಲ್ಲೂಕು ರಚನೆಯಾಗಿ ಹಲವು ವರ್ಷವಾದರೂ ಆಧಾರ್ ಕೇಂದ್ರ ತೆರೆಯಲು ಆಗದಿದ್ದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂಚೆ ಇಲಾಖೆಯಲ್ಲೂ ಅಡಚಣೆ: ರಟ್ಟೀಹಳ್ಳಿ ಪಟ್ಟಣದ ಅಂಚೆ ಕಚೇರಿಯಲ್ಲಿ ಆಧಾರ್ ನವೀಕರಣ ಹಾಗೂ ತಿದ್ದುಪಡಿಗೆ ಅವಕಾಶವಿದೆ. ಆದರೆ, ಕೆಲಸದ ಒತ್ತಡದಿಂದಾಗಿ ಅಂಚೆ ಕಚೇರಿ ಸಿಬ್ಬಂದಿ ಆಧಾರ್ ಬಗ್ಗೆ ಗಮನ ಹರಿಸುತ್ತಿಲ್ಲ. ಆಧಾರ್ ಸೇವೆಯಲ್ಲಿ ಅಡಚಣೆ ಉಂಟಾಗುತ್ತಿದೆ ಎಂದು ಜನರು ದೂರುತ್ತಿದ್ದಾರೆ.

‘ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಪಡಿತರ ಚೀಟಿ, ಆಧಾರ್ ಕಾರ್ಡ್ ಅವಶ್ಯವಾಗಿವೆ. ಆದರೆ, ಸರ್ಕಾರ ಪಡಿತರ ಚೀಟಿ ತಿದ್ದುಪಡಿ, ಹೊಸ ಪಡಿತರ ಚೀಟಿ ಪಡೆಯುವ ಅವಕಾಶವನ್ನು ಜನತೆಗೆ ಒದಗಿಸುತ್ತಿಲ್ಲ. ಕಳೆದ ನಾಲ್ಕೈದು ತಿಂಗಳಿನಿಂದ ಆಧಾರ್ ಕೇಂದ್ರವೂ ಸ್ಥಗಿತಗೊಂಡಿದೆ’ ಎಂದು ಪಟ್ಟಣದ ನಿವಾಸಿ ಪ್ರಶಾಂತ ದ್ಯಾವಕ್ಕಳವರ ಆಕ್ರೋಶ ಹೊರಹಾಕಿದರು.

‘ಆಧಾರ್ ಸೇವಾ ಕೇಂದ್ರ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜನದಟ್ಟಣೆ ತಡೆಯಲು ಪಟ್ಟಣ ಮಾತ್ರವಲ್ಲದೇ ಹೋಬಳಿ ಮಟ್ಟದಲ್ಲೂ ಕೇಂದ್ರ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಆಧಾರ್ ಕೇಂದ್ರ ಬಂದ್ ಆಗಿರುವುದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕೇಂದ್ರ ಪ್ರಾರಂಭಿಸುವ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಯು.ಬಿ. ಬಣಕಾರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.