
ರಟ್ಟೀಹಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳವನ್ನು ಶಾಸಕ ಯು.ಬಿ. ಬಣಕಾರ ಅವರು ಭಾನುವಾರ ಪರಿಶೀಲಿಸಿದರು
ರಟ್ಟೀಹಳ್ಳಿ: ‘ಪಟ್ಟಣದ ಕಂದಾಯ ಇಲಾಖೆಯ ಜಾಗದಲ್ಲಿ ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಜ.19ರಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೂಮಿಪೂಜೆ ನೆರವೇರಿಸುವರು’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ರಾಜಕೀಯ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭಾನುವಾರ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2018ರಲ್ಲಿ ರಟ್ಟೀಹಳ್ಳಿ ನೂತನ ತಾಲ್ಲೂಕು ಎಂದು ಘೋಷಣೆಯಾಯಿತು. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಭರವಸೆ ನೀಡಿದಂತೆ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ₹8.69 ಕೋಟಿ ಅನುದಾನ ನೀಡಿದ್ದು, ಇದೀಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಭೂಮಿಪೂಜೆ ನೆರವೇರಲಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಗಣ್ಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸುವರು. ಈ ವೇಳೆ ಅಗ್ನಿಶಾಮಕ ಠಾಣೆ, ಕಾರ್ಮಿಕ ಭವನ ಉದ್ಘಾಟನೆ ಜರುಗಲಿವೆ ಎಂದು ತಿಳಿಸಿದರು.
ಈ ವೇಳೆ ಮುಖಂಡರಾದ ವೀರನಗೌಡ ಪ್ಯಾಟೀಗೌಡ್ರ, ಪಿ.ಡಿ. ಬಸನಗೌಡ್ರ, ಪರಮೇಶಪ್ಪ ಕಟ್ಟೇಕಾರ, ವಸಂತ ದ್ಯಾವಕ್ಕಳವರ, ವಿನಯ ಪಾಟೀಲ, ಹೇಮಣ್ಣ ಮುದಿರೆಡ್ಡೇರ, ಮನೋಜ ಗೊಣೆಪ್ಪನವರ, ಶಂಕರ ಚನ್ನಗೌಡ್ರ, ಮಂಜುನಾಥ ಅಸ್ವಾಲಿ, ವಿಜಯ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.