ADVERTISEMENT

ಬಹಿರಂಗ ಚರ್ಚೆಗೆ ಸಿದ್ಧ: ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 15:36 IST
Last Updated 27 ಅಕ್ಟೋಬರ್ 2021, 15:36 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹಾವೇರಿ: ಕಾಂಗ್ರೆಸ್ ನಾಯಕರು ಅವರ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮನ್ನು ಬಹಿರಂಗ ಚರ್ಚೆಗೆ ಕರೆಯುತ್ತಾರೆ. ಬಹಿರಂಗ ಚರ್ಚೆಗೆ ಕರೆಯುವ ಮೊದಲು ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿಯನ್ನು ಖುದ್ದಾಗಿ ಬಂದು ನೋಡಬೇಕು. ನಂತರ ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಹಾನಗಲ್‌ ಕ್ಷೇತ್ರದ ಕೂಡಲ, ಮಾಸನಕಟ್ಟಿ, ನರೇಗಲ್ಲ ಮುಂತಾದ ಗ್ರಾಮಗಳಲ್ಲಿ ಬುಧವಾರ ನಡೆದ ‘ಪ್ರಚಾರ ರ‍್ಯಾಲಿ’ಯಲ್ಲಿ ಅವರು ಮಾತನಾಡಿ,ವಿಧಾನಸಭೆಯ ಅಖಾಡದಲ್ಲಿ ಯಾವ ಸರ್ಕಾರದ ಅವಧಿಯಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂಬ ಬಗ್ಗೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಜಾತಿ– ಜಾತಿಗಳ ನಡುವೆ ಕಂದಕ ಸೃಷ್ಟಿ ಮಾಡಿ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಂಗ್ರೆಸ್‌ ಹಾಳು ಮಾಡುತ್ತಿದೆ. ಅಧಿಕಾರದ ಅರಮನೆ ಕಟ್ಟುವ ಕಾಂಗ್ರೆಸ್ ಪ್ರಯತ್ನಕ್ಕೆ ತಕ್ಕ ಪಾಠ ಕಲಿಸಬೇಕು.ಮತಗಳನ್ನು ಒಡೆಯಬೇಕು ಎಂದು ಹಣದ ಚೀಲ ಹಿಡಿದು ಕಾಂಗ್ರೆಸ್‌ ನಾಯಕರು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಕಾಂಗ್ರೆಸ್ ಪಕ್ಷ ಘೋಷಣೆಗಳ ಪಕ್ಷ:

ಇಂದಿರಾ ಗಾಂಧಿ ಗರೀಬಿ ಹಠಾವೋ ಎಂದರು. ಬಡತನ ಹೋಗಿದೆಯೇ? 20 ಅಂಶಗಳ ಕಾರ್ಯಕ್ರಮ ಏನಾಗಿದೆ? ಅನ್ನಭಾಗ್ಯ ಯೋಜನೆ ಕಾಂಗ್ರೆಸ್ ಪಕ್ಷ ಪ್ರಾರಂಭಿಸುವ ಮುನ್ನವೂ ಅಕ್ಕಿ ನೀಡಲಾಗುತ್ತಿತ್ತು. ದೇಶದಲ್ಲಿ ಪಡಿತರ ನೀಡಲು ಶುರು ಮಾಡಿ 50 ವರ್ಷಗಳಾಗಿವೆ. ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಹಚ್ಚಿದ್ದಾರೆಯೇ ವಿನಾ ನ್ಯಾಯ ಕೊಡಲಿಲ್ಲ. ಸಮಾಜವನ್ನು ಒಡೆಯಲು ಅವಕಾಶ ಮಾಡಿಕೊಡಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.