
ರಾಣೆಬೆನ್ನೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ನಗರದಲ್ಲಿ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾವಿರಾರು ಗಣವೇಷಧಾರಿ ಸ್ವಯಂಸೇವಕರು ಮತ್ತು ಕಾರ್ಯಕರ್ತರಿಂದ ಪಥಸಂಚಲನ ನಡೆಯಿತು.
ನಗರದ ತುಂಬೆಲ್ಲ ರಾಷ್ಟ್ರ ಭಕ್ತಿ ಕಾಣಿಸಿತು. ಅಶೋಕ ವೃತ್ತದಲ್ಲಿ ಸಮಾವೇಶಗೊಂಡ ಸಂಘದ ಕಾರ್ಯಕರ್ತರು ಧ್ವಜವಂದನೆ ಸಲ್ಲಿಸಿ, ಸಂಘ ಗೀತೆ ಹಾಡಿ ವ್ಯವಸ್ಥಿತ ಸಾಲು ರಚಿಸಿ ಮೆರವಣಿಗೆ ನಡೆಸಿದರು.
ಇದಕ್ಕೂ ಮುನ್ನ ಪಥ ಸಂಚಲನಕ್ಕೆ ಭಾರತಿ ಜಂಬಗಿ ಹಾಗೂ ಸಂಗಡಿಗರು ಪೂಜೆ ಸಲ್ಲಿಸಿದರು. ಪಟ್ಟಣದ ಜನರು ಪಥ ಸಂಚಲನವನ್ನು ಕಣ್ತುಂಬಿಕೊಂಡರು.
ನಗರದ ರಸ್ತೆಯುದ್ದಕ್ಕೂ ಕಟ್ಟಿದ್ದ ಕೇಸರಿ ಧ್ವಜ, ಕೇಸರಿ ತೋರಣಗಳು ನೋಡುಗರನ್ನು ಆಕರ್ಷಿಸಿದವು. ಸಾವಿರಾರು ಗಣವೇಷಧಾರಿಗಳು ಘೋಷ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಸಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು. ತಾಯಿ ಭಾರತಾಂಬೆಯ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸ್ವಯಂ ಸೇವಕರನ್ನು ಸ್ವಾಗತಿಸಿ ಭಾಗ್ವಾಧ್ವಜಕ್ಕೆ ನಮಿಸಲಾಯಿತು.
ಅವಳಿ ನಗರದಲ್ಲಿ ಮಾರ್ಗ ಮಧ್ಯೆದಲ್ಲಿ ಬಾಲಕ-ಬಾಲಕಿಯರು ವಿವಿಧ ವೇಷಭೂಷಣ ತೊಟ್ಟು ಸ್ವಾಗತಿಸಿದರು. ಸಂಚಲದ ರಸ್ತೆಯುದ್ದಕ್ಕೂ ಅಭಿಮಾನಿಗಳು ಹೂ ಮಳೆ ಸುರಿಸಿ, ರಂಗೋಲಿ ಬಿಡಿಸಿ ಸ್ವಾಗತಿಸಿದರು. ಪ್ರತಿಯೊಬ್ಬರೂ ಜೈ ಶ್ರೀರಾಮ್ ಎಂಬ ಘೋಷಣೆಯ ಮೂಲಕ ಹರ್ಷೋಧ್ಘಾರ ವ್ಯಕ್ತಪಡಿಸಿದರು.
ಇಲ್ಲಿನ ಅಶೋಕ ವೃತ್ತದಿಂದ ಹೊರಟ ಪಥಸಂಚಲನ ರೈಲ್ವೆ ಸ್ಟೇಷನ್, ಸಂಗಮ್ ವೃತ್ತಕ್ಕೆ ಬಂದು ಎರಡು ತಂಡಗಳಾಗಿ ವಿಭಜನೆಗೊಂಡು ಒಂದು ತಂಡ ಗಾಂಧಿಗಲ್ಲಿ ಸಮುದಾಯ ಭವನ, ಚೌಡೇಶ್ವರಿ ಮಹಾದ್ವಾರ, ಅಂಬಾಭವಾನಿ ದೇವಸ್ಥಾನ, ಸುಭಾಷ ವೃತ್ತ, ಮಹಾವೀರ ರಸ್ತೆ, ಚಲವಾದಿ ವೃತ್ತ, ಬಸವೇಶ್ವರ ದೇವಸ್ಥಾನ, ಗುತ್ತಲ ಬಸ್ ನಿಲ್ದಾಣ, ತುಳಜಾಭವಾನಿ ದೇವಸ್ಥಾನದಿಂದ ದುರ್ಗಾ ವೃತ್ತಕ್ಕೆ ಬಂದಿತು.
ಇನ್ನೊಂದು ತಂಡ ಸಂಗಮ್ ವೃತ್ತದಿಂದ ಅಂಚೆ ಕಚೇರಿ ವೃತ್ತ, ಕೆಎಂಪಿ ವೃತ್ತ, ಅಪ್ಪು ವೃತ್ತ, ಎಡಿಬಿ ರಸ್ತೆ, ಚಕ್ಕಿಮಕ್ಕಿ ದೇವಿ ವೃತ್ತ, ಎಂ.ಜಿ.ರಸ್ತೆ ಮೂಲಕ ದುರ್ಗಾ ವೃತ್ತಕ್ಕೆ ಸೇರಿದವು.
ನಂತರ ಎರಡೂ ತಂಡಗಳು ಒಂದಾಗಿ ದುರ್ಗಾ ವೃತ್ತದಿಂದ ಹಳೇ ಸರ್ಕಾರಿ ಆಸ್ಪತ್ರೆ ರಸ್ತೆ, ಗ್ರಾಮೀಣ ಪೊಲೀಸ್ ಠಾಣೆಯ ಕ್ರಾಸ್, ಕುರುಬಗೇರಿ ಕ್ರಾಸ್, ಹಳೇ ಪಿ.ಬಿ.ರಸ್ತೆಯಿಂದ ನಗರಸಭೆ ಕ್ರೀಡಾಂಗಣಕ್ಕೆ ಆಗಮಿಸಿದವು.
ಜೆಸಿಬಿ ವಾಹನಗಳ ಮೇಲೆ ನಿಂತು ಪುಷ್ಟವೃಷ್ಟಿಯ ಮೂಲಕ ಭಾಗವಾ ಧ್ವಜಕ್ಕೆ ವಂದನೆ ಸಲ್ಲಿಸಿದರು. ಪಥಸಂಚಲನಲ್ಲಿ ಪಾಲ್ಗೊಂಡಿದ್ದ ಗಣವೇಷಧಾರಿ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಜಿಲ್ಲಾ ಸಂಘ ಚಾಲಕ ಈಶ್ವರ ಹಾವನೂರ, ಮಾಜಿ ಶಾಸಕ ಅರುಣುಕುಮಾರ ಪೂಜಾರ, ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ, ಕೆ.ಶಿವಲಿಂಗಪ್ಪ, ವೈದ್ಯ ಡಾ.ಬಸವರಾಜ ಕೇಲಗಾರ, ಮಂಜಯ್ಯ ಚಾವಡಿ, ಗದಿಗೆಪ್ಪ ಹೊಟ್ಟಿಗೌಡ್ರ, ಗವಿಸಿದ್ದಪ್ಪ ದ್ಯಾಮಣ್ಣನವರ, ಪೃಥ್ವಿರಾಜ ಜೈನ್, ಸಂಜೀವ ಶಿರಹಟ್ಟಿ, ಮಂಜುನಾಥ ಗೌಡಶಿವಣ್ಣನವರ, ಪಾಂಡುರಂಗ ಪೂಜಾರ, ಶ್ರೀನಿವಾಸ ಏಕಬೋಟೆ, ಶ್ರೀನಿವಾಸ ನಾಡಗೇರ, ಕೆ.ಎನ್.ಷಣ್ಮುಖ, ರಾಮಕೃಷ್ಣ ತಾಂಬೆ, ಎ.ಬಿ.ಪಾಟೀಲ, ಅಜಯ ಮಠದ, ಭೋಜರಾಜ ದಲಬಂಜನ್, ದತ್ತಾತ್ರೇಯ ರೇವಣಕರ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ವಿವಿಧ ಶಾಖೆಗಳ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಡಿವೈಎಸ್ಪಿ ಜೆ.ಲೋಕೇಶ, ನಗರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜಟಗಿ ಬಂದೋಬಸ್ತ್ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.