
ರಾಣೆಬೆನ್ನೂರು: ಮೇಡ್ಲೇರಿ ಹೋಬಳಿ ವ್ಯಾಪ್ತಿಗೆ ಬರುವ ಹತ್ತು ಹಳ್ಳಿಗಳಲ್ಲಿ ‘ಹಳ್ಳಿ ಹಾದಿಗೆ ಸಾಹಿತ್ಯ ದೀವಿಗೆ’ ಸರಣಿ ಕಾರ್ಯಕ್ರಮ ಆಯೋಜಿಸುವ ಮೂಲಕ ರಾಮೀಣ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ, ಅವರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಮೇಡ್ಲೇರಿ ಹೋಬಳಿ ಘಟಕದ ಅಧ್ಯಕ್ಷ ಕಾಂತೇಶ ಅಂಬಿಗೇರ ಹೇಳಿದರು.
ತಾಲ್ಲೂಕಿನ ಮೇಡ್ಲೇರಿ ಬೀರೇಶ್ವರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ರಾಜ್ಯೋತ್ಸವದ ಅಂಗವಾಗಿ ಕಸಾಪ ಜಿಲ್ಲಾ ಮತ್ತು ತಾಲ್ಲೂಕು ಘಟಕ, ಮೇಡ್ಲೇರಿ ಕಸಾಪ ಹೋಬಳಿ ಘಟಕದಿಂದ ‘ಹಳ್ಳಿ ಹಾದಿಗೆ ಸಾಹಿತ್ಯ ದೀವಿಗೆ’ ಸರಣಿ ಕಾರ್ಯಕ್ರಮದ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಪರಿಕಲ್ಪನೆ ಅಡಿಯಲ್ಲಿ ಸರಣಿ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಪ್ರಬಂಧದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸಾಧಕರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಶಿಕ್ಷಕ ಮಹೇಶ್ವರಪ್ಪ ಅವರು ಕರ್ನಾಟಕ ಏಕೀಕರಣವು ಸಾಧಿಸಿದ ಸೌಹಾರ್ದತೆ ವಿಷಯ ಕುರಿತು ಉಪನ್ಯಾಸ ನೀಡಿದರು. ಪ್ರಾಚಾರ್ಯ ಸಣ್ಣಗುಡ್ಡಪ್ಪ ಕೂನಬೇವು ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಏಕೀರಕಣ ಚಳವಳಿ ನಡೆದು ಬಂದ ಹಾದಿ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ದೀಪಾ ಚಾವಡಿ (ಪ್ರಥಮ ಸ್ಥಾನ), ಕವಿತಾ ಕುಂಚೂರ (ದ್ವಿತೀಯ ಸ್ಥಾನ) ಮತ್ತು ದೀಪಾ ಸಮಾರಳರ (ತೃತೀಯ ಸ್ಥಾನ) ಅವರಿಗೆ ಬಹುಮಾನ ವಿತರಿಸಲಾಯಿತು.
ವಿಶ್ವನಾಥ ಎನ್.ಬಿ, ಮಾರುತಿ ತಳವಾರ, ಲಕ್ಕಪ್ಪ ಕುದರಿಹಾಳ, ಕುಮಾರ ಹುಚ್ಚಪ್ಪ ಪೂಜಾರ, ಗಣೇಶ ಕರ್ತಿಮಾಳರ, ಪುಟ್ಟಪ್ಪ ಲಮಾಣಿ, ರಮೇಶ ತಳವಾರ, ವೆಂಕಟೇಶ ಹೊಸಮನಿ, ಫಕ್ಕೀರಪ್ಪ, ರಮೇಶ ದೇವರಗುಡ್ಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.