ADVERTISEMENT

ರಾಣೆಬೆನ್ನೂರು: ಗ್ರಾಮೀಣ ರಸ್ತೆಗಳು ‘ಗುಂಡಿಮಯ’

ವಾಹನ ಸಂಚಾರಕ್ಕೆ ತೊಂದರೆ; ಸವಾರರು ಹೈರಾಟ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:34 IST
Last Updated 30 ಅಕ್ಟೋಬರ್ 2025, 2:34 IST
<div class="paragraphs"><p>ರಾಣೆಬೆನ್ನೂರು ಗೋವಿಂದ ಬಡಾವಣೆ ಸ್ಮಶಾನದಿಂದ ಮುತ್ತಲಕಟ್ಟಿ ಚೌಡೇಶ್ವರಿ ದೇವಸ್ಥಾನದ ರಾಹುತನಕಟ್ಟಿ ವೃತ್ತದವರೆಗೆ ಮಡ್ಲೇರಿ ಮುಖ್ಯರಸ್ತೆ ಹಾಳಾಗಿದೆ</p></div>

ರಾಣೆಬೆನ್ನೂರು ಗೋವಿಂದ ಬಡಾವಣೆ ಸ್ಮಶಾನದಿಂದ ಮುತ್ತಲಕಟ್ಟಿ ಚೌಡೇಶ್ವರಿ ದೇವಸ್ಥಾನದ ರಾಹುತನಕಟ್ಟಿ ವೃತ್ತದವರೆಗೆ ಮಡ್ಲೇರಿ ಮುಖ್ಯರಸ್ತೆ ಹಾಳಾಗಿದೆ

   

ರಾಣೆಬೆನ್ನೂರು: ತಾಲ್ಲೂಕಿನ ಬಹುತೇಕ ಕಡೆಗಳನ್ನು ಗ್ರಾಮೀಣ ಭಾಗದ ರಸ್ತೆಗಳು ಸತತ ಮಳೆಗೆ ಸಂಪೂರ್ಣ ಹದಗೆಟ್ಟಿವೆ. ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿದ್ದರಿಂದ ಪಟ್ಟಣಕ್ಕೆ ವಿದ್ಯಾರ್ಥಿಗಳನ್ನು ಕರೆ ತರುವ ಖಾಸಗಿ ಸ್ಕೂಲ್‌ ಬಸ್‌ಗಳು ಸಮಯಕ್ಕೆ ಸರಿಯಾಗಿ ಕರೆತರಲು ತೊಂದರೆಯಾಗಿದೆ.

ADVERTISEMENT

ತಾಲ್ಲೂಕಿನ ಗೋವಿಂದ ಬಡಾವಣೆ ಯಿಂದ ರಾಹುತನಕಟ್ಟಿ ಕ್ರಾಸ್‌ವರೆಗೆ ರಸ್ತೆ ಹದಗೆಟ್ಟಿದ್ದು, ಶವ ಸಂಸ್ಕಾರಕ್ಕೆ ಹೋಗಲು ತೊಂದರೆಯಾಗಿದೆ. ಕೃಷ್ಣ ಮೃಗ ಅಭಯಾರಣ್ಯ ವೀಕ್ಷಣೆಗೆ ದೇಶ ವಿದೇಶ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ದಿನಾಲು ಬೆಳಗಿನ ಜಾವ ಮತ್ತು ಸಂಜೆ ಪ್ರವಾಸಿಗರನ್ನು ಕೃಷ್ಣಮೃಗಗಳ ವೀಕ್ಷಣೆಗೆ ಕರೆದುಕೊಂಡು ಹೋಗುವ ವೀಕ್ಷಣೆ ಬಸ್‌ ರಸ್ತೆಯ ತೆಗ್ಗಿನಲ್ಲಿ ಬಿದ್ದು ಏಳುವದರಿಂದ ತೆಲೆ, ಮೈ, ಕೈ ಗಾಯ ಮಾಡಿಕೊಂಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಈಚೆಗೆ ರಾಹುತನಕಟ್ಟಿ ವೃತ್ತದ ಬಳಿ ಕೆಂಬ್ರಿಡ್ಜ ಸ್ಕೂಲ್‌ ಬಸ್ಸೊಂದು ಪಲ್ಟಿಯಾಗಿ ತೆಗ್ಗಿನಲ್ಲಿ ಬಿದ್ದು ಅನೇಕ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ.

‘ಇನ್ನು ಕೆಎಸ್‌ಆರ್‌ಟಿಸಿ ಬಸ್‌ ಮೊದಲೇ ಹಳೇ ಬಸ್‌ಗಳು, ಇಂತಹ ರಸ್ತೆಯಲ್ಲಿ ದಿನಾಲು ಹತ್ತಾರು ಟ್ರಿಪ್ ಮಾಡುವ ಬಸ್‌ ಒಳಗಡೆ ಗಡಗಡ ಶಬ್ದ ಬರುತ್ತದೆ. ಸೀಟು ಕಿತ್ತು ತೆಗ್ಗಿಗೆ ಬಿದ್ದರೆ ಸೀಟಿನಲ್ಲಿ ಕುಳಿತ ಪ್ರಯಾಣಿಕರು, ವಯೋವೃದ್ಧರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮುಗುಚಿ ಗದ್ದ ಒಡೆದುಕೊಂಡು ನೋವು ಮಾಡಿಕೊಂಡ ಘಟನೆಗಳು ದಿನಾಲು ನಡೆಯುತ್ತವೆ’ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರು.

’ಇದೇ ರಸ್ತೆಯಲ್ಲಿ ತುಂಗಭದ್ರಾ ನದಿ ತೀರದಿಂದ ಕಲ್ಲು, ಮಣ್ಣು, ಗೊರ್ಚು, ಮರಳನ್ನು ಸಾಗಿಸುವ ಓವರ್‌ ಲೋಡ್‌ ತುಂಬಿದ ಬೃಹತ್‌ ಪ್ರಮಾಣದ ಲಾರಿ ಮತು ಟಿಪ್ಪರ್‌ಗಳು ಹಗಲು ರಾತ್ರಿ ಎನ್ನದೇ ಅಡ್ಡಾಡುತ್ತವೆ. ಬೃಹತ್‌ ಪ್ರಮಾಣದ ಲಾರಿಗಳು ಅಡ್ಡಾಡುವದರಿಂದ ಮತ್ತು ಕಳಪೆ ಕಾಮಗಾರಿಯಿಂದ ರಸ್ತೆ ಕುಸಿತಗೊಂಡು ಗುಂಡಿಗಳು ಬಿದ್ದು, ರಸ್ತೆ ಹದಗೆಡುತ್ತದೆ’ ಎನ್ನುತ್ತಾರೆ ಸಾರ್ವಜನಿಕರು.

‘ಮೇಡ್ಲೇರಿ ಮುಖ್ಯ ರಸ್ತೆಯ ರಾಹುತನಕಟ್ಟಿ ಕ್ರಾಸ್‌ನಿಂದ ಮೇಡ್ಲೇರಿ, ಬೇಲೂರ, ಅಂಕಸಾಪುರ, ಆರೇಮಲ್ಲಾಪುರ, ಯಕ್ಲಾಸಪುರ ವರೆಗೆ ಹೊಸದಾರಿ ರಸ್ತೆ ನಿರ್ಮಿಸಿ ಡಾಂಬರೀಕರಣ ಮಾಡಿದ್ದಾರೆ. ಆದರೆ, ಗೋವಿಂದ ಬಡಾವಣೆಯಿಂದ ರಾಹುತನಕಟ್ಟಿ ಕ್ರಾಸ್‌ವರೆಗೆ 2 ಕಿಮೀ ರಸ್ತೆ ದುರಸ್ಥಿ ಮಾಡಿಸಿಲ್ಲ. ಇದರಿಂದ ವಾಹನಗಳು ಪದೇ ಪದೇ ದುರಸ್ಥಿಗೆ ಬರುತ್ತವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ತಿಳಿಸಿದ್ದೇವೆ ಆದರೂ ಇದುವರೆಗೂ ರಸ್ತೆ ದುರಸ್ಥಿ ಪಡಿಸಿಲ್ಲ. ಹಾಟ್‌ ಮಿಕ್ಸ್‌ ಹಾಕುತ್ತಾರೆ ವಾಹನ ಭರಾಟೆಗೆ ಮತ್ತೆ ಕಿತ್ತು ಹೋಗುತ್ತದೆ’ ಎನ್ನುತ್ತಾರೆ ಹಿರೇಬಿದರಿಯ ಮಂಜುನಾಥ.

ತುಂಗಭದ್ರಾ ನದಿ ತೀರದಿಂದ ಮರಳು, ಮಣ್ಣು, ಇಟ್ಟಿಗೆ ಸಾಗಿಸುವ ಮಜಡಾ ಮಿನಿ ಲಾರಿ, 10 ರಿಂದ 12 ವೀಲ್‌ ಲಾರಿಗಳು ಮತ್ತು ಟಿಪ್ಪರ್‌ಗಳು ನಿರಂತರ ಅಡ್ಡಾಡುವದರಿಂದ ರಸ್ತೆಗಳು ಅನೇಕ ಕಡೆ ಕುಸಿದು ಬಿದ್ದಿವೆ. ಮೆಕ್ಕೆಜೋಳ, ಭತ್ತದ ಬೆಳೆಯನ್ನು ಮಾರುಕಟ್ಟೆಗೆ ತರಲು ರೈತರು ಹರಸಾಹಸ ಪಡುವಂತಾಗಿದೆ. ಕೆಲ ಲಾರಿಗಳು ಗುಂಡಿಯಲ್ಲಿ ಬಿದ್ದು ಬಾರಿ ಅನಾಹುತ ತಪ್ಪಿವೆ. ಅಲ್ಲದೇ ಓವರ್‌ ಲೋಡ್‌ ಹೇರಿಕೊಂಡು ಬರುವುದರಿಂದ ರಸ್ತೆಗಳು ಹಗಲೆಲ್ಲ ದುರಸ್ಥಿಗೆ ಬರುತ್ತವೆ ಎನ್ನುತ್ತಾರೆ ಟಿಪ್ಪರ್‌ ಚಾಲಕರು.

ನಿರಂತರ ನೀರು ಹರಿಯುವುದರಿಂದ ರಸ್ತೆ ಕಲ್ಲುಗಳು ಕಿತ್ತು ಗುಂಡಿಗಳು ಹೊಂಡಗಳಾಗಿ ಮಾರ್ಪಟ್ಟಿವೆ. ಈ ರಸ್ತೆಯ ಗುಂಡಿಗಳಲ್ಲಿ ಆರಾಮಾಗಿ ಒಬ್ಬರ ಶವ ಸಂಸ್ಕಾರ ಮಾಡಬಹುದು. ಅಂತಹ ಗುಂಡಿಗಳು ಬಿದ್ದಿವೆ. ಟಂಟಂ ಗಾಡಿ ತರಕಾರಿಯನ್ನು ಸಮಯಕ್ಕೆ ಸರಿಯಾಗಿ ಎಪಿಎಂಸಿ ಹರಾಜಿಗೆ ಸಾಗಿಸಲು ಹರಸಾಹಪ ಪಡುವಂತಾಗಿದೆ. ಇದೇ ರಸ್ತೆಯ ಸಮೀಪದಲ್ಲಿ ಅರಣ್ಯ ಪ್ರದೇಶ ಇರುವುದರಿಂದ ರೈತರು ಜಮೀನಿನಿಂದ ಸಂಜೆ ಮನೆಗೆ ಬರುವಾಗ ಪದೆ ಪದೇ ಚಿರತೆ ಪ್ರತ್ಯಕ್ಷವಾಗಿ ಕಾಣುತ್ತಿದೆ. ಭಯಗೊಂಡು ಅನೇಕರು ಗಾಡಿ ಸಮೇತ ಗುಂಡಿಯಲ್ಲಿ ಬಿದ್ದಿದ್ದಾರೆ.

’ಗಂಗಾಜಲ ತಾಂಡೆ, ಗೋವಿಂದ ಬಡಾವಣೆ, ಬಸಲೀಕಟ್ಟಿ ತಾಂಡಾ ರೈತರು ಜಮೀನುಗಳಿಂದ ಬೆಳೆದ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳನ್ನು ಮನೆಗೆ ಸಾಗಿಸಲು ಅನನುಕೂಲವಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಪ್ಪ ಲಮಾಣಿ.

ಫಾರೆಸ್ಟ್‌ ಐಬಿಯಿಂದ ರಾಹುತನಕಟ್ಟಿ ಕ್ರಾಸ್‌ವರೆಗೆ 2 ಕಿಮೀ ರಸ್ತೆ ಡಾಂಬರೀಕರಣ ಮಾಡಲು ಟೆಂಡರ್‌ ಕರೆಯಲಾಗಿದೆ. ಸದ್ಯಕ್ಕೆ ಗುಂಡಿ ಮುಚ್ಚಿಸಾಲಗುವುದು.
ಜಗದೀಶ ಕೋಳಿವಾಡ, ಎಇಇ, ಲೊಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.