ADVERTISEMENT

ಪ್ರಜಾವಾಣಿ ಸಾಧಕರು; ಗ್ರಾಮೀಣ ಪ್ರದೇಶದ ಬಹುಮುಖ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 10:58 IST
Last Updated 1 ಜನವರಿ 2022, 10:58 IST
ನಾಮದೇವ ಕಾಗದಗಾರ
ನಾಮದೇವ ಕಾಗದಗಾರ   

ರಾಣೆಬೆನ್ನೂರು: ಇಲ್ಲಿನ ಅಶೋಕನಗರದ ನಿವಾಸಿ ಚಿತ್ರಕಲಾವಿದ, ಛಾಯಾಗ್ರಾಹಕ, ವ್ಯಂಗ್ಯಚಿತ್ರಕಾರ, ಹವ್ಯಾಸಿ ಬರಹಗಾರ ನಾಮದೇವ ಜಿ. ಕಾಗದಗಾರ ಅವರು ಗ್ರಾಮೀಣ ಪ್ರದೇಶದ ಬಹುಮುಖ ಪ್ರತಿಭೆ.

ವ್ಯಂಗ್ಯಚಿತ್ರಗಳ ಮುಖಾಂತರ ನಾಡಿನ ಓದುಗರನ್ನು ತಲುಪಿದ ನಾಮದೇವ ಕಾಗದಗಾರ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಛಾಯಾಚಿತ್ರ, ಆವೆಮಣ್ಣು, ಥರ್ಮಾಕೋಲ್‌, ಜಲವರ್ಣ, ತೈಲವರ್ಣ ಈ ರೀತಿ ಹತ್ತು ಹಲವು ಮಾಧ್ಯಮಗಳಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.

18 ಸಾವಿರ ವ್ಯಂಗ್ಯಚಿತ್ರಗಳು, ಎರಡು ಲಕ್ಷಕ್ಕೂ ಅಧಿಕ ರೇಖಾಚಿತ್ರಗಳು,5 ಸಾವಿರಕ್ಕೂ ಹೆಚ್ಚು ಪೇಂಟಿಂಗ್ಸ್ ರಚಿಸಿದ್ದಾರೆ. ಕೊರೊನಾ ಜಾಗೃತಿ ಸಂಬಂಧಿಸಿದ 100ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು ಓದುಗರ ಮೆಚ್ಚುಗೆ ಗಳಿಸಿವೆ. ವ್ಯಂಗ್ಯಚಿತ್ರಗಳ ಮೂಲಕ ಮತದಾನ, ಸ್ವಚ್ಛ ಭಾರತ, ರಕ್ತದಾನ, ನೇತ್ರದಾನ, ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ADVERTISEMENT

ಮಕ್ಕಳೊಂದಿಗೆ ಚಿತ್ರಕಲೆ ಮೂಲಕ ಆಟ-ಗೀಚಾಟ, ವ್ಯಂಗ್ಯಚಿತ್ರರಚನೆ, ವನ್ಯಜೀವಿ ಛಾಯಾಗ್ರಹಣ, ಪುಸ್ತಕಗಳ ಮುಖಪುಟ ರಚನೆ, ಲೇಖನ-ಕವನ ಬರೆಯುವುದು ಸಾಹಿತ್ಯ, ರಂಗಸಜ್ಜಿಕೆ ವಿನ್ಯಾಸ, ರಂಗಪರಿಕರಗಳ ತಯಾರಿಕೆ ಮತ್ತು ಕರಕುಶಲ ಕಲೆಗಳ ತಯಾರಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಭೂಮಿ ಅಕಾಡೆಮಿ ಆಫ್ ಆರ್ಟ್‌ ಮತ್ತು ಕಲ್ಚರ್ ಹಾಗೂ ಕಾಗದ ಸಾಂಗತ್ಯ ವೇದಿಕೆಗಳ ಮೂಲಕ ಸಾಹಿತ್ಯ, ಸಂಸ್ಕೃತಿ, ಕಲೆಯ ತರಬೇತಿ ಜೊತೆಗೆ ಮಕ್ಕಳ ಮನೋವಿಕಾಸಕ್ಕೆ ನೀರೆರೆಯುತ್ತಿದ್ದಾರೆ. ‘ದೇವರಿಗೂ ಬೀಗ’, ‘ನೆಲದ ನಂಟು’ ಪುಸ್ತಕಗಳು ಪ್ರಕಟವಾಗಿವೆ. ರಾಜ್ಯ ಮತ್ತು ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ– ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.