
ಸವಣೂರು: ‘ನಮ್ಮ ದೇಶದ ಶ್ರೇಷ್ಠ ಸಂವಿಧಾನ, ಸ್ವಾತಂತ್ರ್ಯ ಮತ್ತು ವೈವಿಧ್ಯತೆಯ ಹೆಮ್ಮೆಯನ್ನು ನೆನಪಿಸುವ ದಿನ ಗಣರಾಜ್ಯೋತ್ಸವ’ ಎಂದು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ತಿಳಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಪುರಸಭೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಸಂವಿಧಾನ ನೀಡಿರುವ ಹಕ್ಕು, ಕರ್ತವ್ಯ ಮತ್ತು ಸಮಾನತೆಯ ಮೌಲ್ಯಗಳನ್ನು ಗೌರವಿಸಿ, ಶಾಂತಿ, ಏಕತೆ ಮತ್ತು ಪ್ರಗತಿಯ ರಾಷ್ಟ್ರವನ್ನು ಕಟ್ಟೋಣ’ ಎಂದರು.
ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಸಮಾರಂಭದ ಪರೇಡ್ಗೆ ಸವಣೂರಿನ ತುಂಗಾ ಎ. ಶಿವಲಿಂಗಯ್ಯ ಆಯ್ಕೆಯಾದ ನಿಮಿತ್ತ ಅವರ ಪೋಷಕರಿಗೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ರಾಜಕುಮಾರ ಅರ್ಕಸಾಲಿ ಪಾಲಕರನ್ನು ಸನ್ಮಾನಿಸಲಾಯಿತು.
2025ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ತಾಲ್ಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ತೃಪ್ತಿ ಪ್ರಕಾಶ ಘೋರ್ಪಡೆ, ಅಭಿಷೇಕ ಗಂಗಪ್ಪ ಮತ್ತೂರ, ಸ್ವಾತಿ ಶಿವಪ್ಪ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಸರ್ಕಾರದ ವತಿಯಿಂದ ತಲಾ ₹ 50 ಸಾವಿರ ಶೈಕ್ಷಣಿಕ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.
ಪಟ್ಟಣದ ಆರ್ಎಂಎಸ್ ಉರ್ದುಶಾಲೆಯ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ತಂಡ ಎಲ್ಲರ ಗಮನ ಸೆಳೆಯಿತು.
ನಂತರ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಶರಣರ, ದಾರ್ಶನಿಕರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಪ್ರರ್ದಶನ (ಟ್ಯಾಬ್ಲೊ), ಕವಾಯತ್, ಗೌರವ ವಂದನೆ ಸಲ್ಲಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪೊಲೀಸ್ ಇಲಾಖೆ, ಗೃಹ ರಕ್ಷಕದಳ ಸಿಬ್ಬಂದಿ ಶಿಸ್ತುಬದ್ಧ ಪರೇಡ್ನೊಂದಿಗೆ ಗೌರವ ವಂದನೆ ಸಲ್ಲಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಸ ಮಜ್ಜಗಿ, ತಹಶೀಲ್ದಾರ್ ರವಿಕುಮಾರ ಕೊರವರ, ಗ್ರೇಡ್-2 ತಹಶೀಲ್ದಾರ್ ಗಣೇಶ ಸವಣೂರ, ಪಿಐ ತಿಮ್ಮಣ್ಣ ಚಾಮನೂರ, ತಾಲ್ಲೂಕು ಪಂಚಾಯಿತಿ ಇಒ ಬಿ.ಎಸ್.ಶಿಡೇನೂರ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಸಿಡಿಪಿಒ ಉಮಾ ಕೆ.ಎಸ್., ಬಿಆರ್ಸಿ ಅಡಿವೆಪ್ಪ ತಿಪ್ಪಕ್ಕನವರ, ಪ್ರಮುಖರಾದ ರವಿ ಕರಿಗಾರ, ರಾಮಣ್ಣ ಅಗಸರ, ಚನ್ನಪ್ಪ ಮರಡೂರ, ಹರೀಶಗೌಡ ಪಾಟೀಲ ಪಾಲ್ಗೊಂಡಿದ್ದರು.
ಬಿಇಒ ಎಂ.ಎಫ್.ಬಾರ್ಕಿ, ಬಿಆರ್ಪಿ ಡಿ.ಆರ್. ತೋಟಗೇರ, ಸಿಆರ್ಪಿ ನಾಗರಾಜ ಬಂಡಿವಡ್ಡರ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.