ADVERTISEMENT

ಹಾನಗಲ್ | ಸಭೆಗೆ ಆಹ್ವಾನವಿಲ್ಲ: ಕುಂದುಕೊರತೆ ಸಭೆಗೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 2:58 IST
Last Updated 9 ಆಗಸ್ಟ್ 2025, 2:58 IST
ಹಾನಗಲ್‌ನಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯನ್ನು ಬಹಿಷ್ಕರಿಸಿದ ದಲಿತ ಮುಖಂಡರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಹರಿಹಾಯ್ದರು
ಹಾನಗಲ್‌ನಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯನ್ನು ಬಹಿಷ್ಕರಿಸಿದ ದಲಿತ ಮುಖಂಡರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಹರಿಹಾಯ್ದರು   

ಹಾನಗಲ್: ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ತಾಲ್ಲೂಕಿನ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯನ್ನು ಬಹಿಷ್ಕರಿಸಿದ ಮುಖಂಡರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸಭೆ ಮುಂದೂಡಲಾಯಿತು. 

ಸಭೆಯ ಬಗ್ಗೆ ಇಲಾಖೆ ಅಧಿಕಾರಿಗಳು ತಮಗೆ ಮಾಹಿತಿ ನೀಡಿರಲಿಲ್ಲ ಎಂದು ವಿವಿಧ ಸಮುದಾಯಗಳ ಪ್ರಮುಖರು ಆರೋಪಿಸಿ ಸಭೆಯ ಆರಂಭದಲ್ಲಿಯೇ ಹೊರ ನಡೆದರು.

ಕುಂದು ಕೊರತೆಗಳ ನಿವಾರಣೆಯ ಸಭೆ ಆಯೋಜಿಸುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ  ವಹಿಸುತ್ತಿದ್ದಾರೆ ಎಂದು ಹರಿಹಾಯ್ದರು. ಸಭೆಯ ನೇತೃತ್ವ ವಹಿಸಿದ್ದ ತಹಶೀಲ್ದಾರ್ ರೇಣುಕಾ ಎಸ್. ಅವರ ಮನವಿಗೂ ಸ್ಪಂದಿಸಲಿಲ್ಲ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಾ ಹಿರೇಮಠ ಅವರ ಮನವೊಲಿಕೆ ಪ್ರಯತ್ನ ಕೂಡ ಕೈಗೂಡಲಿಲ್ಲ.

ADVERTISEMENT

ತಹಶೀಲ್ದಾರ್ ಕಚೇರಿ ಪ್ರವೇಶ ದ್ವಾರದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದ ಮುಖಂಡರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ದಲಿತ ಮುಖಂಡ ಉಮೇಶ ದೊಡ್ಡಮನಿ ಮಾತನಾಡಿ, ಕಾಟಾಚಾರಕ್ಕಾಗಿ ಸಭೆ ಆಯೋಜಿಸಲಾಗಿತ್ತು. ಪರಿಶಿಷ್ಟ ಜಾತಿ, ಪಂಗಡಗಳ ಸಾಕಷ್ಟು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿತ್ತು. ಆದರೆ ಸಮುದಾಯದ ಪ್ರಮುಖರನ್ನು ಸಭೆಯಿಂದ ಹೊರಗಿಡುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.

ವಿವಿಧ ಸಮುದಾಯಗಳ ಪ್ರಮುಖರಾದ ಬಸವರಾಜ ಡುಮ್ಮಣ್ಣನವರ, ರಾಜಕುಮಾರ ಶಿರಪಂತಿ, ಶಿವಣ್ಣ ಮಾಸನಕಟ್ಟಿ, ಬಸವರಾಜ ಎಸ್‌ಟಿಡಿ, ಲಕ್ಷ್ಮಣ ಬಾರ್ಕಿ, ಮಂಜುನಾಥ ಕರ್ಜಗಿ, ದುರ್ಗಪ್ಪ ಹರಿಜನ, ವಸಂತ ವೆಂಕಟಾಪೂರ, ಪ್ರಭು ಬಾರ್ಕಿ, ಸಿದ್ಧಪ್ಪ ಹರವಿ, ಸಿದ್ಲಿಂಗಪ್ಪ ಲಕ್ಮಾಪೂರ, ಮಂಜು ಹರಿಜನ, ಜಗದೀಶ ಹರಿಜನ, ಮಾರುತಿ ಹಂಜಗಿ ಇದ್ದರು.

ಕಾರಣಾಂತರಗಳಿಂದ ಸಭೆ ಮುಂದೂಡಲಾಗಿದ್ದು, ಸಂಬಂಧಿಸಿದ ಸಮುದಾಯಗಳ ಪ್ರಮುಖರೊಂದಿಗೆ ಚರ್ಚಿಸಿ ಸಭೆಯ ಮುಂದಿನ ದಿನ ನಿಗದಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಾ ಹಿರೇಮಠ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.