ADVERTISEMENT

ಕಜ್ಜರಿ ಪ್ಲಾಟ್‌ನಲ್ಲಿ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:42 IST
Last Updated 4 ಮಾರ್ಚ್ 2026, 5:42 IST
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕಜ್ಜರಿ ಪ್ಲಾಟ್‌ನ ನಿವಾಸಿಗಳು ನೀರು ತರಲು ದೂರದ ಜಮೀನುಗಳಿಗೆ ಹೊರಟಿರುವುದು
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕಜ್ಜರಿ ಪ್ಲಾಟ್‌ನ ನಿವಾಸಿಗಳು ನೀರು ತರಲು ದೂರದ ಜಮೀನುಗಳಿಗೆ ಹೊರಟಿರುವುದು   

ಹಾವೇರಿ: ಜಿಲ್ಲೆಯಲ್ಲಿ ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಲವು ಜನವಸತಿ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ರಾಣೆಬೆನ್ನೂರು ತಾಲ್ಲೂಕಿನ ಕಜ್ಜರಿ ಪ್ಲಾಟ್‌ನ ನಿವಾಸಿಗಳು, ಹಲವು ದಿನಗಳಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಜ್ಜರಿ ಪ್ಲಾಟ್‌ನಲ್ಲಿ ಸುಮಾರು 250 ಮನೆಗಳಿವೆ. ಈ ಪ್ರದೇಶದ ಮನೆಗಳಿಗೆ ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಸ್ಥಳದಲ್ಲಿರುವ ನೀರಿನ ಜಲಾಗಾರ ಸಹ ಹಾಳಾಗಿದ್ದು, ನೀರು ಸಂಗ್ರಹವೇ ಇಲ್ಲದಂತಾಗಿದೆ. ಕೆಲದಿನಗಳಿಂದ ಮನೆಗಳಿಗೆ ನೀರು ಬಂದಿಲ್ಲ. ಪ್ಲಾಟ್‌ನಲ್ಲಿರುವ ಕೊಳವೆಬಾವಿಗಳೂ ಹಾಳಾಗಿದ್ದು, ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.

ಮನೆಯ ಜನರು ನೀರು ತರಲು ಕೊಡಗಳನ್ನು ಹಿಡಿದು ಜಮೀನಿನಲ್ಲಿರುವ ಕೊಳವೆಬಾವಿಗಳಿಗೆ ಹೋಗುತ್ತಿದ್ದಾರೆ. ಮನೆಯ ಮಹಿಳೆಯರು, ಕೊಡಗಳನ್ನು ಹಿಡಿದು ಜಮೀನಿಗೆ ತೆರಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಪ್ಲಾಟ್‌ನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಪರಿಹಾರ ನೀಡುವಂತೆ ಗ್ರಾಮ ಪಂಚಾಯಿತಿಗೆ ನಿವಾಸಿಗಳು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ ನಿವಾಸಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ADVERTISEMENT

‘ಕಜ್ಜರಿ ಪ್ಲಾಟ್‌ನಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದೇವೆ. ಇಲ್ಲಿಯೇ ನೀರಿನ ದೊಡ್ಡ ಟ್ಯಾಂಕ್ ಇದೆ. ತುಂಗಭದ್ರಾ ನದಿಯಿಂದ ಅದಕ್ಕೆ ನೀರು ಹರಿಸಲಾಗುತ್ತದೆ. ಅದೇ ನೀರನ್ನು ತಿಂಗಳಿಗೊಮ್ಮೆ ಮನೆಗಳಿಗೆ ಬಿಡುತ್ತಾರೆ. ಉಳಿದ ಸಮಯದಲ್ಲಿ ನೀರು ಬಿಡುವುದಿಲ್ಲ. ಗ್ರಾಮದಲ್ಲಿರುವ ಕೊಳವೆಬಾವಿಗಳು ಕೆಟ್ಟಿವೆ. ಅವುಗಳ ದುರಸ್ತಿಯನ್ನೂ ಮಾಡಿಸಿಲ್ಲ. ಇದರಿಂದ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

‘ಗ್ರಾಮದಲ್ಲಿ ಸರಿಯಾದ ನೀರು ಪೂರೈಕೆ ವ್ಯವಸ್ಥೆಯಿಲ್ಲ. ನೀರಿಗಾಗಿ ಕಿ.ಮೀ.ಗಟ್ಟಲೇ ಹೋಗಿ ಬರಬೇಕಾದ ಸ್ಥಿತಿಯಿದೆ. ಬೇಸಿಗೆ ಆರಂಭವಾಗಿ ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚು ನೀರು ಬೇಕಾಗುತ್ತಿದೆ. ಆದರೆ, ನೀರು ಸಿಗುತ್ತಿಲ್ಲ. ಮಹಿಳೆಯರು, ಮಕ್ಕಳಿಗೆ ನೀರು ತರುವುದೇ ಕೆಲಸವಾಗಿದೆ’ ಎಂದು ಗ್ರಾಮಸ್ಥರು ಹೇಳಿದರು.

‘ನೀರಿಗಾಗಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ನೀರಿನ ಸಮಸ್ಯೆ ಹೆಚ್ಚಾಗಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಜನರಿಗೆ ನೀರು ಕೊಡಲು ಕ್ರಮ ಕೈಗೊಳ್ಳುತ್ತಿಲ್ಲ. ಕೆಟ್ಟು ಹೋಗಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಿಸುತ್ತಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.