ADVERTISEMENT

ರಸ್ತೆ ಮೇಲೆ ಕೊಳಚೆ ನೀರು, ಬಯಲೇ ಶೌಚಾಲಯ: ಸಮಸ್ಯೆಗಳ ಸುಳಿಯಲ್ಲಿ ತಡಸ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 5:41 IST
Last Updated 29 ಫೆಬ್ರುವರಿ 2024, 5:41 IST
ತಡಸ ಗ್ರಾಮದ ದುಂಡಿ ಬಸವೇಶ್ವರ ಪ್ರೌಢಶಾಲೆಗೆ ಹೋಗುವ ರಸ್ತೆ ಮೇಲೆ ಚರಂಡಿ ನೀರು ಹರಿಯಿತು
ತಡಸ ಗ್ರಾಮದ ದುಂಡಿ ಬಸವೇಶ್ವರ ಪ್ರೌಢಶಾಲೆಗೆ ಹೋಗುವ ರಸ್ತೆ ಮೇಲೆ ಚರಂಡಿ ನೀರು ಹರಿಯಿತು    

ತಡಸ: ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿಕೊಂಡು, ಕೊಳಚೆ ನೀರು ಮುಂದಕ್ಕೆ ಹರಿಯದೆ ದುರ್ವಾಸನೆ ಹರಡುತ್ತಿದೆ. ರಸ್ತೆಗಳು ಸಹ ಹಾಳಾಗಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

ಚರಂಡಿಗಳಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ. ದುಂಡಿ ಬಸ್ವೇಶ್ವರ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.

‘ಚರಂಡಿಗಳಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತಿದ್ದು, ಸುತ್ತಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ’ ಎಂದು ಗ್ರಾಮಸ್ಥ ರಣಗಪ್ಪ ಪೂಜಾರ ತಿಳಿಸಿದರು.

ADVERTISEMENT

ಪದವಿ ಕಾಲೇಜು ಇಲ್ಲ: ಗ್ರಾಮವು ಇತರೆ ಗ್ರಾಮಗಳ ಕೊಂಡಿಯಂತಿದ್ದು, ಸುತ್ತಲಿನ ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಾರೆ. ಆದರೆ, ಪದವಿ ಕಾಲೇಜು ಇಲ್ಲದೆ, ಉನ್ನತ ಶಿಕ್ಷಣಕ್ಕಾಗಿ ಹುಬ್ಬಳ್ಳಿ, ಮುಂಡುಗೋಡ ಸೇರಿದಂತೆ ದೂರದ ಊರುಗಳಿಗೆ ಹೋಗಬೇಕಿದೆ.

ಶೌಚಾಲಯ ಸಮಸ್ಯೆ: ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ವಹಣೆ ಅಸಮರ್ಪಕವಾಗಿರುವ ಕಾರಣ, ಜನರು ಬಯಲಲ್ಲೇ ಮಲ–ಮೂತ್ರ ವಿಸರ್ಜನೆ ಮಾಡುತ್ತಾರೆ. ಮಹಿಳೆಯ ಶೌಚಾಲಯಕ್ಕೆ ಬೀಗ ಹಾಕಿದ್ದು, ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಹಲವು ಬಾರಿ ಸಾರಿಗೆ ಸಂಸ್ಥೆಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆರೋಪಿಸಿದರು.

ಗ್ರಾಮದಿಂದ ಕಲಘಟಗಿ ಸಂಪರ್ಕಿಸುವ ರಸ್ತೆಯಲ್ಲಿ ಹೆಜ್ಜೆಹೆಜ್ಜೆಗೆ ತಗ್ಗು–ಗುಂಡಿಗಳು ಉಂಟಾಗಿದ್ದು, ಪ್ರಯಾಣಿಕರು ಆತಂಕದಲ್ಲೇ ಸಂಚರಿಸುವಂತಾಗಿದೆ.

ತಡಸ ಮಾರ್ಗವಾಗಿ ಕಲಘಟಗಿ ತಾಲೂಕಿಗೆ ಸಂಪರ್ಕಿಸುವ ರಸ್ತೆ ತಗ್ಗು ಗುಂಡಿಗಳು ಬಿದ್ದಿರುವುದು.
ಗ್ರಾಮದಲ್ಲಿ ಈಗಾಗಲೆ ಸ್ವಚ್ಛತೆ ಮಾಡಲಾಗುತ್ತಿದ್ದು ಶೀಘ್ರ ಸಂಪೂರ್ಣ ಸ್ವಚ್ಛಗೊಳಿಸಲಾಗುತ್ತದೆ. ವಿವಿಧ ಸಮಸ್ಯೆಗಳನ್ನೂ ಪರಿಹರಿಸಲಾಗುತ್ತದೆ
ಈರಣ್ಣ ಗಾಣಗಿ ಪಿಡಿಒ
ಉಗ್ರ ಹೋರಾಟದ ಎಚ್ಚರಿಕೆ
‘ತಡಸ ಗ್ರಾಮವು ಧಾರವಾಡ ಉತ್ತರ ಕನ್ನಡ ಹಾವೇರಿ ಜಿಲ್ಲೆಗಳಿಗೆ ಕೊಂಡಿಯಾಗಿದೆ. ಆದರೆ ಇಲ್ಲಿನ ಪದವಿಪೂರ್ವ ಕಾಲೇಜಿಗೆ ಮೈದಾನದ ಕೊರತೆಯಿದೆ. ಮಕ್ಕಳ ಕ್ರೀಡಾಭ್ಯಾಸಕ್ಕೆ ತೊಂದರೆಯಾಗಿದೆ. ಚರಂಡಿ ಬಸ್ ನಿಲ್ದಾಣದಲ್ಲಿ ಶೌಚಾಲಯದ ದುರಸ್ತಿ ಆದಷ್ಟು ಬೇಗ ಆಗಬೇಕು. ಅಧಿಕಾರಿಗಳು ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಕರವೇ ಅಧ್ಯಕ್ಷ ಮಂಜುನಾಥ್ ಓಲೆಕಾರ್ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.