ಶಿಗ್ಗಾವಿ: ತಾಲ್ಲೂಕಿನ ಕೆಂಗಾಪುರ ಗ್ರಾಮದಿಂದ ಕಾರಡಿ ಗ್ರಾಮಕ್ಕೆ ಹೋಗುವ ರಸ್ತೆ ಹದಗೆಟ್ಟಿದ್ದು, ತಗ್ಗುಗುಂಡಿಗಳು ಬಿದ್ದು ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ.
ಮಳೆ ನೀರು ಇಡೀ ರಸ್ತೆಯ ಮೇಲೆ ನಿಂತು ಕೆಸರು ಗದ್ದೆಯಂತೆ ಕಾಣುತ್ತಿದೆ. ರಸ್ತೆಯಲ್ಲಿ ಆಳವಾದ ತಗ್ಗುಗುಂಡಿಗಳು ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಕೈ,ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಹಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿ ಕಾಮಗಾರಿ ಮಾಡುತ್ತಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ದೂರುತ್ತಿದ್ದಾರೆ.
ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದು ಕಾಡಿನಂತೆ ಕಾಣುತ್ತಿದೆ. ಆಯ ತಪ್ಪಿದರೆ ಸಾಕು ಮುಳ್ಳಿರುವ ಗಿಡಗಂಟಿಗಳೊಳಗೆ ಬಿಳುವಂತಾಗಿದೆ. ತಿರುವಿನಲ್ಲಿ ಮುಂದಿನಿಂದ ಬರುವ ವಾಹನಗಳೂ ಕಾಣದಂತಾಗಿದೆ. ಅದರಿಂದ ನಿತ್ಯ ಹಲವು ಅಪಘಾತಗಳು ನಡೆಯುತ್ತಿವೆ. ಅಪಘಾತದಲ್ಲಿ ತೀವ್ರ ಗಾಯಗಳಾಗಿವೆ. ತಕ್ಷಣ ರಸ್ತೆ ಕಾಮಗಾರಿ ಹಮ್ಮಿಕೊಳ್ಳಬೇಕು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮದ ನಿವಾಸಿ ನಿಂಗಪ್ಪ ಓಲೇಕಾರ ಆಗ್ರಹಿಸಿದ್ದಾರೆ.
‘ರಸ್ತೆ ಪಕ್ಕದ ಚರಂಡಿಗಳು ತುಂಬಿಕೊಂಡಿವೆ. ಮಳೆ ನೀರು ಹರಿದು ಹೋಗದಂತಾಗಿವೆ. ಹೀಗಾಗಿ ಪಕ್ಕದ ಜಮೀನಿನಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿವೆ. ಇಡೀ ಜಮೀನು ಜವಳು ಹಿಡಿದು ಬೆಳೆ ಬಾರದಂತಾಗಿವೆ. ಅದರಿಂದ ಸುತ್ತಲಿನ ಜಮೀನಿನ ರೈತ ಸಮೂಹ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
‘ಮೇಲಧಿಕಾರಿಗಳು ಕ್ರಮ ಕೈಗೊಳ್ಳಲಿ’
ಕೆಂಗಾಪುರ ಹತ್ತಿರದ ರಸ್ತೆ ಶಾಲಾ ವಲಯದ ಮುಂದಿನ ರಸ್ತೆ ಸಹ ಹಾಳಾಗಿದೆ. ಈ ಕುರಿತು ಸಂಬಂಧಿಸಿ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ರಸ್ತೆ ಕಾಮಗಾರಿ ಕೈಗೊಳ್ಳಲು ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ನಿವಾಸಿ ನಿಂಗಪ್ಪ ಓಲೇಕಾರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.