
ಹಾವೇರಿ: ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಕರ್ನಾಟಕ ಕ್ಷತ್ರೀಯ ಒಕ್ಕೂಟದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಕ್ಷತ್ರೀಯ ಸಮಾಜದವರು ಈ ಮೆರವಣಿಗೆ ಹಮ್ಮಿಕೊಂಡಿದ್ದರು. ಅವರ ಜೊತೆಯಲ್ಲಿ ಹಿಂದೂ ಸಮಾಜದ ಹಲವರು ಮೆರವಣಿಗೆಗೆ ಸಾಥ್ ನೀಡಿದರು.
ಬಾಗಲಕೋಟೆಯಲ್ಲಿ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ಉಂಟಾಗಿದ್ದರಿಂದ, ಹಾವೇರಿಯಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪುರಸಿದ್ದೇಶ್ವರ ದೇವಸ್ಥಾನದಿಂದ ಸಂಜೆ ಮೆರವಣಿಗೆ ಆರಂಭವಾಯಿತು.
ನಿಗದಿಯಂತೆ ಮೇಲಿನ ಪೇಟೆ ಹಾಗೂ ಸುಭಾಷ್ ವೃತ್ತದ ಮೂಲಕ ಮೆರವಣಿಗೆ ಸಾಕಬೇಕಿತ್ತು. ರಮ್ಜಾನ್ ಉಪವಾಸ ವ್ರತ ಇರುವುದರಿಂದ ಇಫ್ತಾರ್ ಸಮಯದಲ್ಲಿ ಸುಭಾಷ್ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಸೇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಇದೇ ಕಾರಣಕ್ಕೆ, ಮೇಲಿನ ಪೇಟೆ ಹಾಗೂ ಸುಭಾಷ್ ವೃತ್ತಕ್ಕೆ ಮೆರವಣಿಗೆ ಹೋಗದಂತೆ ಆಯೋಜಕರಿಗೆ ಪೊಲೀಸರು ಮನವಿ ಮಾಡಿದರು. ಇದೇ ವಿಚಾರವಾಗಿ ಎರಡು ಗುಂಪುಗಳ ನಡುವೆ ಕೆಲ ಕಾಲ ಮಾತಿನ ಜಟಾಪಟಿ ನಡೆಯಿತು.
‘ಹಾವೇರಿ ಸೌಹಾರ್ದಯುತ ನಗರ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು’ ಎಂದು ಪೊಲೀಸರಿಗೆ ಹೇಳಿದ ಆಯೋಜಕರು, ಸುಭಾಷ್ ವೃತ್ತಕ್ಕೆ ಹೋಗುವುದನ್ನು ಕೈಬಿಟ್ಟು ಮಾರ್ಗ ಬದಲಿಸಿದರು. ಪುರಸಿದ್ದೇಶ್ವರ ದೇವಸ್ಥಾನದಿಂದ ನೇರವಾಗಿ ಎಂ.ಜಿ.ರಸ್ತೆಯ ಪಾದಗಟ್ಟಿಗೆ ತೆರಳಿದರು. ಅಲ್ಲಿಂದ, ಗಾಂಧಿ ವೃತ್ತ, ಜೆ.ಪಿ. ವೃತ್ತ ಹಾಗೂ ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ಮರಾಠ ಭವನ ತಲುಪಿದರು. ಅಲ್ಲಿಯೇ ಮೆರವಣಿಗೆ ಸಮಾಪ್ತಗೊಂಡಿತು.
ಸಮುದಾಯದ ಪುರುಷರು ಹಾಗೂ ಮಹಿಳೆಯರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಪುರುಷರು, ಬಿಳಿ ಅಂಗಿ ಹಾಗೂ ಬಿಳಿ ಪ್ಯಾಂಟ ತೊಟ್ಟು ತಲೆಗೆ ಪೇಟಾ ಧರಿಸಿ ಮಿಂಚಿದರು. ಮಹಿಳೆಯರು ಸಹ ಪೇಟಾ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.
ಮೈಲಾರದ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ, ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಒಕ್ಕೂಟದ ಜಿಲ್ಲಾ ಸಮಿತಿ ಅಧ್ಯಕ್ಷ ಶಂಕರ ಮೆಹರವಾಡೆ, ಗೌರವ ಅಧ್ಯಕ್ಷ ನಾಗರಾಜ ಜೋರಾಪುಡಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.