ಹಾವೇರಿ: ‘ಸಮಯ ಬಹಳ ಮುಖ್ಯ. ಅದನ್ನು ವಿದ್ಯಾರ್ಥಿನಿಯರು ಹಾಳು ಮಾಡಿಕೊಳ್ಳಬಾರದು. ಓದುವ ವಯಸ್ಸಿನಲ್ಲಿ ಪ್ರೀತಿ–ಪ್ರೇಮ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದರೆ ಮಾತ್ರ ಗುರಿ ಸಾಧನೆ ಸಾಧ್ಯ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಇಲ್ಲಿಯ ಜಿ.ಎಚ್. ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಪಿಯುಸಿ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿನಿಯರ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಗ್ರಾಮೀಣ ಭಾಗದ ಮಹಿಳೆಯರ ಪರಿಸ್ಥಿತಿ ನೋವು ತರಿಸುತ್ತಿದೆ. ಬಾಲಗರ್ಭಿಣಿಯರು ಹಾಗೂ ಪ್ರೀತಿ–ಪ್ರೇಮ ಪ್ರಕರಣಗಳು ಹೆಚ್ಚಾಗುತ್ತಿವೆ. ಓದುವ ವಯಸ್ಸಿನಲ್ಲಿ ಪ್ರೀತಿ–ಪ್ರೇಮದ ಬಲೆಗೆ ಬೀಳುವುದು ಬೇಡ. ತಂದೆ–ತಾಯಿ ನಿಮ್ಮ ಮೇಲೆ ನಂಬಿಕೆ ಇಟ್ಟು ಓದಲು ಕಳುಹಿಸುತ್ತಾರೆ. ಅವರ ಆಸೆಯಂತೆ ಗುರಿ ಸಾಧನೆ ಮಾಡಿ’ ಎಂದರು.
‘ಕೆಲವರು ಪ್ರೀತಿ ಹೆಸರಿನಲ್ಲಿ ಮಹಿಳೆಯರನ್ನು ಗರ್ಭಿಣಿಯನ್ನಾಗಿ ಮಾಡುತ್ತಿದ್ದಾರೆ. ಬಳಿಕ, ಮದುವೆಗೆ ನಿರಾಕರಿಸುತ್ತಾರೆ. ಕೊನೆಯಲ್ಲಿ, ಜಾತಿ ಅಡ್ಡ ಬರುತ್ತದೆ. ಓದುವ ವಯಸ್ಸಿನಲ್ಲಿ ಇದೆಲ್ಲ ಬೇಕಾ? ಪ್ರೀತಿಗಿಂತ ಭವಿಷ್ಯ ಮುಖ್ಯ. ಎಲ್ಲರೂ ಶಿಕ್ಷಣವಂತರಾದರೆ, ಸ್ವತಂತ್ರವಾಗಿ ಜೀವನ ನಡೆಸಬಹುದು’ ಎಂದು ಸಲಹೆ ನೀಡಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಬ್ಲ್ಯಾಕ್ಮೇಲ್: ‘ಇಂದು ಬಹುತೇಕ ವಿದ್ಯಾರ್ಥಿನಿಯರು ಮೊಬೈಲ್ ಬಳಸುತ್ತಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್... ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ಹೊಂದಿದ್ದಾರೆ. ಇದು ಹೆಚ್ಚು ಅಪಾಯಕಾರಿ. ವೈಯುಕ್ತಿಕ ಫೋಟೊ, ವಿಡಿಯೊ ಹಾಗೂ ಖಾಸಗಿ ವಿಷಯವನ್ನು ಅಪರಿಚಿತರ ಜೊತೆ ಹಂಚಿಕೊಳ್ಳಬಾರದು’ ಎಂದು ನಾಗಲಕ್ಷ್ಮಿ ಎಚ್ಚರಿಕೆ ನೀಡಿದರು.
‘ಅಪರಿಚಿತರಿಂದ ಬರುವ ರಿಕ್ವೆಸ್ಟ್ ಸ್ವೀಕರಿಸಬಾರದು. ಅವರಿಗೂ ರಿಕ್ವೆಸ್ಟ್ ಕಳುಹಿಸಬಾರದು. ಫೋಟೊ, ವಿಡಿಯೊ ಇಟ್ಟುಕೊಂಡು ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ಮೇಲ್ ಮಾಡುತ್ತಾರೆ. ಅದನ್ನು ಬಂಡವಾಳ ಮಾಡಿಕೊಂಡು ಪದೇ ಪದೇ ದೌರ್ಜನ್ಯ ಎಸಗಿದ ಪ್ರಕರಣಗಳು ನಡೆದಿವೆ. ವಿದ್ಯಾರ್ಥಿನಿಯರು ಯಾವುದೇ ವಿಷಯಗಳಿದ್ದರೆ, ಮೊದಲಿಗೆ ತಂದೆ–ತಾಯಿ ಬಳಿ ಹೇಳಿಕೊಳ್ಳಬೇಕು. ಅನ್ಯಾಯವಾದರೆ ಪೊಲೀಸ್ ಠಾಣೆಗೂ ದೂರು ನೀಡಬೇಕು. ತಪ್ಪು ತಿದ್ದಿಕೊಳ್ಳಲು ಅವಕಾಶವಿರುತ್ತದೆ. ಹೆದರಿ, ಜೀವವನ್ನೇ ಕಳೆದುಕೊಳ್ಳಬಾರದು’ ಎಂದು ಹೇಳಿದರು.
‘ಆದಿಕಾಲದಿಂದಲೂ ನಮ್ಮ ಹೋರಾಟ ನಡೆಯುತ್ತಿದೆ. ಅಂದು ನಮಗೆ ಎಲ್ಲವೂ ಸಿಕ್ಕಿದ್ದರೆ, ಇಂದು ವಿಧಾನಸೌಧದಲ್ಲಿ 224ಕ್ಕೆ 224 ಸ್ಥಾನಗಳಲ್ಲಿ ಮಹಿಳೆಯರು ಇರುತ್ತಿದ್ದರು. ಮಹಿಳೆಯರು ಕೇವಲ ವೈದ್ಯ, ಎಂಜಿನಿಯರ್, ಐಎಎಸ್ ಅಧಿಕಾರಿಯಾದರೆ ಸಾಲದು. ರಾಜಕೀಯಕ್ಕೂ ಬರಬೇಕು. ಮುಖ್ಯಮಂತ್ರಿಯೂ ಆಗಬೇಕು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಎಲ್., ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರೇವತಿ ಹೊಸಮಠ ಇದ್ದರು.
ವಿದ್ಯಾರ್ಥಿನಿಯರ ಜೊತೆ ಸಂವಾದ ದೂರು ನೀಡಲು ಹಿಂಜರಿಕೆ ಬೇಡ | ಯಾರಾದರೂ ತೊಂದರೆಯಲ್ಲಿದ್ದರೆ 112ಕ್ಕೆ ಕರೆ ಮಾಡಿ
ಸಾಧನೆ ಮಾಡಲು ಓದು ಅಗತ್ಯ. ವಿದ್ಯಾರ್ಥಿನಿಯರು ನಿತ್ಯವೂ ಕನಿಷ್ಠ 4 ಗಂಟೆ ಓದುವ ಹವ್ಯಾಸವಿಟ್ಟುಕೊಳ್ಳಬೇಕು. ಸಮಾಜದಲ್ಲಿ ಏನಾಗುತ್ತದೆ ಎಂಬ ಅರಿವು ಇರಬೇಕುನಾಗಲಕ್ಷ್ಮಿ ಚೌಧರಿ ಅಧ್ಯಕ್ಷೆ ರಾಜ್ಯ ಮಹಿಳಾ ಆಯೋಗ
‘ಅಪವಿತ್ರಳೆಂದು ಹೇಳಿದ ಬ್ರಾಹ್ಮಣರು’
‘ಎಲ್ಲವೂ ಆಗಿರುವ ಹೆಣ್ಣು ಗಟ್ಟಿಗತ್ತಿಯಿದ್ದಂತೆ. ಆದರೆ ವ್ಯವಸ್ಥೆ ಆಕೆಯ ಕೈ ಕಟ್ಟಿಹಾಕಿರುವುದು ವಿಪರ್ಯಾಸ. ಮಂತ್ರೋಪನಿಷತ್ತು ಇಲ್ಲದ ಹೆಣ್ಣು ಅಪವಿತ್ರಳೆಂದು ಬ್ರಾಹ್ಮಣರು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಮಹಿಳೆಯನ್ನು ಕೇವಲ ಹೆರಿಗೆ ಯಂತ್ರವಾಗಿ ಮನೆ ನೋಡಿಕೊಳ್ಳುವವಳನ್ನಾಗಿ ಸಮಾಜ ನೋಡುತ್ತಿದೆ’ ಎಂದು ನಾಗಲಕ್ಷ್ಮ ಚೌಧರಿ ಬೇಸರಿಸಿದರು. ‘ಬಸವಣ್ಣ ತನ್ನ ಅಕ್ಕನಿಗೆ ಜನಿವಾರ ಹಾಕಲಿಲ್ಲವೆಂದು ಮನೆ ಬಿಟ್ಟು ಹೊರಗೆ ಬಂದರು. ಅಂಥ ಬಸವಣ್ಣ ಬಿ.ಆರ್. ಅಂಬೇಡ್ಕರ್ ಜ್ಯೋತಿಬಾಫುಲೆ ಲಾಲಾ ಲಜಪತ್ ರಾಯ್ ಅವರಿಂದ ನಾವೆಲ್ಲರೂ ಇಂದು ಇಲ್ಲಿ ಕುಳಿತಿದ್ದೇವೆ. ಗಂಡ ಸತ್ತರೆ ಪತ್ನಿಯನ್ನು ಜೀವಂತವಾಗಿ ಚಿತೆಗೆ ಹಾರಿಸುವ ವ್ಯವಸ್ಥೆಯಿತ್ತು. ಅಂದಿನಿಂದಲೇ ನಮ್ಮ ತನಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದು ಇನ್ನು ಮಾಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.