ADVERTISEMENT

ಶಿಗ್ಗಾವಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ವಿರುದ್ಧ ಕೆಲ ಸದಸ್ಯರ ಪ್ರತಿಭಟನೆ

ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಸಿದ್ದಾರ್ಥಗೌಡ ಪಾಟೀಲ; ಆರೋಪ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:35 IST
Last Updated 26 ಆಗಸ್ಟ್ 2025, 5:35 IST
ಶಿಗ್ಗಾವಿ ಪಟ್ಟಣದ ಪುರಸಭೆ ಎದುರು ಪುರಸಭೆ ಅಧ್ಯಕ್ಷರ ಕಾರ್ಯವೈಖರಿ ಖಂಡಿಸಿ ಪುರಸಭೆಯ ಕೆಲ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು
ಶಿಗ್ಗಾವಿ ಪಟ್ಟಣದ ಪುರಸಭೆ ಎದುರು ಪುರಸಭೆ ಅಧ್ಯಕ್ಷರ ಕಾರ್ಯವೈಖರಿ ಖಂಡಿಸಿ ಪುರಸಭೆಯ ಕೆಲ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು   

ಶಿಗ್ಗಾವಿ: ಪಟ್ಟಣದ ಅಭಿವೃದ್ಧಿ ಕುರಿತು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲರ ಕಾರ್ಯವೈಖರಿ ಖಂಡಿಸಿ ಸೋಮವಾರ ನಡೆದ ವಿಶೇಷ ಸಭೆ ಬಹಿಷ್ಕರಿಸಿದ ಕೆಲವು ಸದಸ್ಯರು ಪುರಸಭೆ ಎದುರಿಗೆ ಕುಳಿತು ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ವಿಶೇಷ ಸಭೆಯಲ್ಲಿ ಚರ್ಚಿಸಿ ಅನುಮೋದನೆ ತೆಗೆದುಕೊಳ್ಳುವ ಕೆಲಸವಾಗುತ್ತಿದೆ. ಇದನ್ನು ಪ್ರಶ್ನಿಸಿದ ಸದಸ್ಯನ ಮೇಲೆ ಸದಸ್ಯ ಜಾಫರ್ ಪಠಾಣ ‘ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಪುರಸಭೆಯ ಹಿರಿಯ ಸದಸ್ಯರಾಗಿದ್ದ ಸುಭಾಸ ಚೌಹಾಣ್ ನಿಧನರಾದರೂ ಅವರ ನಿಧನಕ್ಕೆ ಸಂತಾಪ ಸೂಚಿಸದೆ ಅವಮಾನ ಮಾಡುತ್ತಿದ್ದಾರೆ’ ಎಂದರು.

‘ಕಳೆದ ಒಂದು ವರ್ಷವಾದರೂ ಸಾಮಾನ್ಯ ಸಭೆ ಕರೆಯಲು ಮುಂದಾಗಿಲ್ಲ, ಜನರ ಪುರಸಭೆಗೆ ತಮ್ಮ ಕೆಲಸ ಕಾರ್ಯಗಳಿಗೆ ಬಂದರೆ ಅಧಿಕಾರಿಗಳು ಪುರಸಭೆಯಲ್ಲಿ ಇರುವುದಿಲ್ಲ, ಪಕ್ಷಗಳಿಗಿಂತ ಊರಿನ ಹಿತ ಮುಖ್ಯ, ಪಟ್ಟಣದಲ್ಲಿ ಮುಂಬರುವ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳಿಗೆ ಸ್ವಚ್ಚತೆ ಆಗಿಲ್ಲ. ಬೇರೆಯವರ ಹೆಸರಿನಲ್ಲಿ ನಮ್ಮ ಸದಸ್ಯರೇ ಪುರಸಭೆಯ ಮೋಟರ್ ಕೆಲಸಗಳ ನಿರ್ವಹಣೆ ಮಾಡುತ್ತಾರೆ, ಪುರಸಭೆಯ ಆಡಳಿತದ ವಿಷಯದಲ್ಲಿ ಬಹಳಷ್ಟು ಅನುಮಾನ ಮೂಡುತ್ತಿದೆ’ ಎಂದು ಆರೋಪಿದರು.

ADVERTISEMENT

ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಅವರು ಕೆಲವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು ಹೀಗಾಗಿ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾ ನಿರತ ಸದಸ್ಯರ ದಯಾನಂದ ಅಕ್ಕಿ ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರಾದ ಶ್ರೀಕಾಂತ ಬುಳ್ಳಕನವರ, ದಯಾನಂದ ಅಕ್ಕಿ, ಸುಲೇಮಾನ್ ಭಾಷಾ ತರ್ಲಗಟ್ಟ, ನಸ್ರೀನ್ ಬಾನು ತಿಮ್ಮಾಪುರ, ಮುಮ್ತಾಜ್ ಗೊಟಗೋಡಿ, ಮುಸ್ತಾಕ್ ಅಹಮ್ಮದ್ ತಹಶೀಲ್ದಾರ್, ಜ್ಯೋತಿ ನಡೂರ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆರೋಪಗಳು ಸತ್ಯಕ್ಕೆ ದೂರ: ಸಿದ್ದಾರ್ಥಗೌಡ ಪಾಟೀಲ

‘ಪಟ್ಟಣದ ಅಭಿವೃದ್ದಿಯ ದೃಷ್ಟಿಯಿಂದ ಕೆಲ ಟೆಂಡರ್‌ಗಳಿಗೆ ತುರ್ತು ಅನುಮೋದನೆ ಕೊಡುವುದಿತ್ತು. ಹೀಗಾಗಿ ವಿಶೇಷ ಸಭೆಯನ್ನು ಕರೆದಿದ್ದೇವೆ. ಸಭೆಯಲ್ಲಿ ಸದಸ್ಯರಿಗೆ ಯಾವುದೇ ನಿಂದನೆ ಮಾಡಿಲ್ಲ. ಎಲ್ಲ ಸದಸ್ಯರ ಸಹಕಾರದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಪ್ರತಿ ಸದಸ್ಯರ ಹೇಳಿಕೆಯ ಕುರಿತು ಗಮನಿಸಿದ್ದೇನೆ. ಕೆಲವು ಸದಸ್ಯರು ನಮ್ಮ ವಿರುದ್ಧ ಮಾಡುವ ಆರೋಪಗಳು ಸತ್ಯಕ್ಕೆ ದೂರವಾಗಿವೆ’ ಎಂದು ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.