ADVERTISEMENT

ಪೋಷಕರೇ ಮಕ್ಕಳ ಮಾತು ನಿರ್ಲಕ್ಷಿಸಬೇಡಿ

ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಎಸ್ಪಿ ಕೆ.ಜಿ.ದೇವರಾಜು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 13:08 IST
Last Updated 20 ಡಿಸೆಂಬರ್ 2019, 13:08 IST
ಹಾವೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸಾಗಾಣಿಕೆಯಿಂದ ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ’ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಎಸ್‌.ಎಚ್‌.ರೇಣುಕಾದೇವಿ ಉದ್ಘಾಟಿಸಿದರು  –ಪ್ರಜಾವಾಣಿ ಚಿತ್ರ
ಹಾವೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸಾಗಾಣಿಕೆಯಿಂದ ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ’ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಎಸ್‌.ಎಚ್‌.ರೇಣುಕಾದೇವಿ ಉದ್ಘಾಟಿಸಿದರು  –ಪ್ರಜಾವಾಣಿ ಚಿತ್ರ   

ಹಾವೇರಿ: ‘ಮಕ್ಕಳ ಮಾತುಗಳನ್ನು ಕೆಲವು ಪೋಷಕರು ಕೇಳಿಸಿಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಸಿಗದೆ, ಮಕ್ಕಳು ಅನೇಕ ತೊಂದರೆಗಳಿಗೆ ಸಿಲುಕುತ್ತಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಹೇಳಿದರು.

ನಗರದ ದೇವರಾಜ ಅರಸು ಸಭಾಭವನದಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸಾಗಾಣಿಕೆಯಿಂದ ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಆಯ್ಕೆ ಸ್ವಾತಂತ್ರ್ಯ ಕೊಡದೆ, ನಮ್ಮ ನಿರ್ಧಾರಗಳನ್ನು ಅವರ ಮೇಲೆ ಹೇರುತ್ತಿದ್ದೇವೆ. ನಾವು ತೋರುವ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದಾಗಿ ಮಕ್ಕಳು ಅಡ್ಡದಾರಿ ಹಿಡಿಯುತ್ತಿದ್ದಾರೆ. ಹಾಗಾಗಿ ನಾವೆಲ್ಲರೂ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕಿದೆ ಎಂದು ಪೋಷಕರಿಗೆ ಸಲಹೆ ನೀಡಿದರು.

ADVERTISEMENT

ಪ್ರಪಂಚದ ಅತಿ ದೊಡ್ಡ ಕರಾಳ ದಂಧೆಗಳಲ್ಲಿ ಮಾದಕ ದ್ರವ್ಯ ಮಾರಾಟಕ್ಕೆ ಮೊದಲ ಸ್ಥಾನವಿದೆ. 2ನೇ ಸ್ಥಾನ ಮಾನವ ಸಾಗಾಣಿಕೆ. ಈ ದಂಧೆಯಲ್ಲಿ ಪುರುಷರು, ಮಹಿಳೆಯರು, ಬಾಲಕ–ಬಾಲಕಿಯರು... ಹೀಗೆ ವಯಸ್ಸು ಮತ್ತು ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಸಂತ್ರಸ್ತರಾಗುತ್ತಿದ್ದಾರೆ. ಇಂಥ ಸಂತ್ರಸ್ತರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಜೀತ ಪದ್ಧತಿಗೆ ದೂಡುವುದು, ಅಂಗಾಂಗಗಳನ್ನು ಕದ್ದು ಮಾರಾಟ ಮಾಡುವುದು ಮುಂತಾದ ಕೃತ್ಯಗಳನ್ನು ಆರೋಪಿಗಳು ಎಸಗುತ್ತಾರೆ. ದೇಶದಲ್ಲಿ ಕಾನೂನು ಬಲಿಷ್ಠವಾಗಿದ್ದರೂ, ಜನರಿಗೆ ಅದರ ಅರಿವು ಕಡಿಮೆ ಇರುವುದರಿಂದ ಅನೇಕ ಸಮಸ್ಯೆಗಳು ತಲೆದೋರುತ್ತಿವೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳನ್ನು ಪೊಲೀಸ್‌ ಠಾಣೆಗೆ ಕರೆತನ್ನಿ:

ಈಗ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಇದೆ. ಹೀಗಾಗಿ ಯಾವುದೇ ಹಿಂಜರಿಕೆ, ಭಯ ಇಲ್ಲದೆ ನಿಮ್ಮ ದೂರುಗಳನ್ನು ಸಲ್ಲಿಸಿ ಸೂಕ್ತ ರಕ್ಷಣೆ ಪಡೆಯಿರಿ. ಶಿಕ್ಷಣ ಇಲಾಖೆ ಅಧಿಕಾರಿಗಳು, ಪಠ್ಯೇತರ ಚಟುವಟಿಕೆಯಲ್ಲಿ ‘ಪೊಲೀಸ್‌ ಠಾಣೆ ಭೇಟಿ’ ಕಾರ್ಯಕ್ರಮವನ್ನು ಕಡ್ಡಾಯಗೊಳಿಸಿ. ಇದರಿಂದ ಮಕ್ಕಳಿಗೆ ಪೊಲೀಸ್‌ ವ್ಯವಸ್ಥೆ ಬಗ್ಗೆ ಅರಿವು ಬರುತ್ತದೆ’ ಎಂದು ಸಲಹೆ ನೀಡಿದರು.

ಸುರಕ್ಷತೆಯ ಪಾಠ ಮನೆಯಿಂದಲೇ ಆರಂಭಿಸಿ:

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಸ್.ಎಚ್‌.ರೇಣುಕಾದೇವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸಮಾಜ ಘಾತುಕ ಶಕ್ತಿಗಳು ಈಗ ಹೆಚ್ಚಾಗಿವೆ. ಹಾಗಾಗಿ ಮಕ್ಕಳ ಚಲನವಲನದ ಬಗ್ಗೆ ಪೋಷಕರು ಸದಾ ಜಾಗೃತರಾಗಿರಬೇಕು. ಅವರಿಗೆ ‘ಸುರಕ್ಷತೆಯ ಪಾಠ’ವನ್ನು ಮನೆಯಿಂದಲೇ ಆರಂಭಿಸಬೇಕು. ಇಲ್ಲದಿದ್ದರೆ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಬೆಳಗಾವಿ ಸ್ಪಂದನಾ ಸಂಸ್ಥೆ ನಿರ್ದೇಶಕಿ ಸುಶೀಲ ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಶ್ರೀವಿದ್ಯಾ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಕೆ.ಸಿ.ಪಾವಲಿ, ಕಾರ್ಯದರ್ಶಿ ಪಿ.ಎಂ.ಬೆನ್ನೂರ, ಸರ್ಕಾರಿ ಅಭಿಯೋಜಕರಾದ ಎಸ್.ಎಂ.ಗೆಜ್ಜಿಹಳ್ಳಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಎಸ್.ಎಚ್.ಮಜೀದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಿ.ವೈ.ಶೆಟ್ಟಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.