ತಿಳವಳ್ಳಿ: ‘ಹಾನಗಲ್ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಅವರು ಅಭಿವೃದ್ಧಿಯ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಈ ಹೆಜ್ಜೆ ಗುರುತುಗಳು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಕೈ ಹಿಡಿಯಲಿವೆ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ತಿಳವಳ್ಳಿ ಸೇರಿದಂತೆ ಬ್ಯಾತನಾಳ, ಕೊಪ್ಪಗೊಂಡನಕೊಪ್ಪ, ಕಿರವಾಡಿ, ಹೊಂಕಣ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚಿಸಿ ಮಾತನಾಡಿದರು.
‘ಸಿದ್ದರಾಮಯ್ಯನವರು ಸಕ್ಕರೆ ಕಾರ್ಖಾನೆ ಬಗ್ಗೆ ಮಾತನಾಡುತ್ತಿದ್ದಾರೆ. 5 ವರ್ಷ ಅಧಿಕಾರವಿದ್ದಾಗ ಸಕ್ಕರೆ ಕಾರ್ಖಾನೆ ನೆನಪಾಗದೆ ಇದ್ದಿದ್ದು, ಈಗ ಚುನಾವಣೆ ಬಂದಾಗ ಮಾತನಾಡುತ್ತಿದ್ದಾರೆ. ಅನೇಕ ಭಾಗ್ಯಗಳನ್ನು, ಯೋಜನೆಗಳನ್ನು ಜಾರಿಗೆ ತಂದಿದ್ದೇನೆ ಎಂದು ಹೇಳುವ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು, ಬಾದಾಮಿಯಲ್ಲಿ ಕೇವಲ 1,500 ಮತಗಳಿಂದ ಗೆದ್ದರು. ಒಬ್ಬ ಮುಖ್ಯಮಂತ್ರಿ ಆದ ಅಭ್ಯರ್ಥಿ ಕೇವಲ 1,500 ಮತಗಳಿಂದ ಅಲ್ಲ; 1 ಲಕ್ಷ ಮತಗಳಿಂದ ಗೆಲ್ಲಬೇಕಾಗಿತ್ತು’ ಎಂದರು.
‘ಎಸ್.ಟಿ ಜನಾಂಗದವರ ಅಭಿವೃದ್ಧಿಗಾಗಿ ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ನಮ್ಮ ಬಿಜೆಪಿ ವಾಲ್ಮೀಕಿ ಜಯಂತಿ, ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ. ಆದ್ದರಿಂದ ಎಲ್ಲ ನನ್ನ ಮತ ಬಾಂಧವರು ಕಮಲದ ಗುರುತಿಗೆ ಮತ ನೀಡಬೇಕು’ ಎಂದು ಕೇಳಿಕೊಂಡರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ‘5 ವರ್ಷ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ ಈ ತಾಲ್ಲೂಕಿಗೆ ಏನು ಕೆಲಸ ಮಾಡಿದೆ? ಕೊರೊನಾ ಸಂದರ್ಭದಲ್ಲಿ ಸಹಾಯ ಮಾಡಿದ್ದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ’ ಎಂದರು.
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಹೇಮಲತಾ ಸಜ್ಜನರ, ಶಿವಲಿಂಗಪ್ಪ ತಲ್ಲೂರ, ಬಸವರಾಜ ಹಾದಿಮನಿ, ಶಿವಾನಂದ ಯಮನಕ್ಕನವರ, ಮಂಜುಳಾ ಕರಬಸಮ್ಮ, ರಾಮಣ್ಣ ಮಾದಾಪೂರ, ತಿಮ್ಮಪ್ಪ ಕೋಟಿಹಳ್ಳಿ, ಹನುಮಂತಪ್ಪ ಕಲ್ಲೇರ, ಹನುಮಂತಪ್ಪ ಶಿರಾಳಕೊಪ್ಪ, ಸುರೇಶ ವಾಲ್ಮೀಕಿ, ಕೆಂಚಪ್ಪ ಕನಕಣ್ಣವರ, ಮಾಲತೇಶ ವಡಿಯರು, ಕುಮಾರ ಯತ್ತಿನಹಳ್ಳಿ, ಗಿರೀಜಮ್ಮ ತಳವಾರ, ಅಪ್ಪುಶೆಟ್ಟಿ, ಮಾಲತೇಶ ಘಾಳಪೂಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.