ಹಾವೇರಿ: ‘ಪಂಚಾಯತ್ರಾಜ್ನಲ್ಲಿರುವ ಕರ್ತವ್ಯಗಳು, ತಿದ್ದುಪಡಿಗಳು ಬಗ್ಗೆ ಅರಿವು ಬೆಳೆಸಿಕೊಳ್ಳಿ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಪಾತ್ರಗಳ ಬಗ್ಗೆ ಪಂಚಾಯಿತಿ ಸದಸ್ಯರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು’ ಎಂದುರಾಜೀವ್ ಗಾಂಧಿ ಪಂಚಾಯತ್ ರಾಜ್ ರಾಜ್ಯ ಘಟಕದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಹೇಳಿದರು.
ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಜೀವಗಾಂಧಿ ಪಂಚಾಯತ್ರಾಜ್ ಸಂಘಟನೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಗ್ರಾಮೀಣ ಜನರಿಗೆ ಅಧಿಕಾರ ಕೊಡಬೇಕೆಂಬ ಅದಮ್ಯ ಚಿಂತನೆಯನ್ನು ನಡೆಸಿ, ಅದರಂತೆ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದು ಅಧಿಕಾರ ವಿಕೇಂದ್ರೀಕರಣಗೊಳಿಸಿದ ಕೀರ್ತಿ ಮಾಜಿ ಪ್ರಧಾನಿ ರಾಜೀವಗಾಂಧಿ ಅವರಿಗೆ ಸಲ್ಲುತ್ತದೆ. ಗ್ರಾಮೀಣಾಭಿವೃದ್ಧಿಗೆ ಅವರ ಕೊಡುಗೆ ಅಪಾರ’ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ‘ಹಾವೇರಿ ನಾಡು ಸ್ವಾತಂತ್ರ್ಯ ಯೋಧರಿಗೆ ಪ್ರೇರಣೆ ನೀಡಿದ ನಾಡು. ಕವಿಗಳು, ದಾರ್ಶನಿಕರು ಬೆಳೆದ ನಾಡಿನಲ್ಲಿ ಸಂಘಟನೆ ಬಲವರ್ಧನೆಯಾಗಬೇಕು. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಹಕ್ಕನ್ನು ತಾವೇ ಚಲಾಯಿಸಬೇಕು’ ಎಂದು ಸಲಹೆ ನೀಡಿದರು.
ಹಾವೇರಿ ಜಿಲ್ಲಾ ಸಂಯೋಜಕರಾಗಿ ಕೊಟ್ರೇಶಪ್ಪ ಬಸೇಗಣ್ಣಿ ಅವರಿಗೆ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷರು ಆದೇಶ ಪತ್ರವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ. ಹಿರೇಮಠ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್, ರಾಷ್ಟ್ರೀಯ ಸಂಚಾಲಕ ಬಿನಿತಾ ವೊರಾ, ರಾಜ್ಯ ಸಂಚಾಲಕ ಉಮೇಶ ಬ್ಯಾಳಿ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೊಡ, ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ್. ಎಸ್.ಎಫ್.ಎನ್. ಗಾಜಿಗೌಡ್ರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಸ್ ಕೆ.ಕರಿಯಣ್ಣವರ, ಜಗದೀಶ ಬೇಟಗೇರಿ, ಈರಪ್ಪ ಲಮಾಣಿ, ಡಾ.ಸಂಜಯ ಡಾಂಗೆ, ಎಂ.ಎಂ. ಮೈದೂರ, ಪ್ರಭು ಬಿಷ್ಠನಗೌಡ್ರ, ಪ್ರಸನ್ನ ಹಿರೇಮಠ, ಶಿವಕುಮಾರ ತಾವರಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.