ಸಾಂದರ್ಭಿಕ ಚಿತ್ರ
ಹಾವೇರಿ: ನಗರದ ಕಾಲೇಜೊಂದರ ಬಿ.ಕಾಂ. ವಿದ್ಯಾರ್ಥಿಯನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಹಾವೇರಿ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಹುಬ್ಬಳ್ಳಿ ಕೇಶ್ವಾಪುರದ ಅರುಣ ಬಸವರಾಜ ಬಡ್ನಿ (26), ಚೇತನ್ ಅಣ್ಣಪ್ಪ ಹಣಗಿ (26), ಶಾಂತಿನಗರದ ಅಕ್ಷಯ ಅಶೋಕ ಕುರಿಯವರ (27) ಹಾಗೂ ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ನಾಗರಾಜ ಫಕ್ಕೀರಪ್ಪ ದೊಡವಾಡ (24) ಬಂಧಿತರು. ಇವರಿಂದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಏಪ್ರಿಲ್ 1ರಂದು ನಡೆದಿರುವ ಘಟನೆಯಿಂದ ತೀವ್ರ ಗಾಯಗೊಂಡಿರುವ ಬಿ.ಕಾಂ. ವಿದ್ಯಾರ್ಥಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಹರಣ ಹಾಗೂ ಕೊಲೆ ಯತ್ನ ಬಗ್ಗೆ ಅವರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
ಮದುವೆಯಲ್ಲಿ ಪರಿಚಯವಾಗಿ ಪ್ರೇಮ: ‘ನಗರದ ಕಾಲೇಜೊಂದರಲ್ಲಿ ಓದುತ್ತಿರುವ ಯುವತಿ, ಹುಬ್ಬಳ್ಳಿಯಲ್ಲಿ ನಡೆದ ಮದುವೆಯೊಂದಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಆಕೆಯನ್ನು ಆರೋಪಿ ಅರುಣ ಪರಿಚಯ ಮಾಡಿಕೊಂಡಿದ್ದ. ನಂತರ, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರೆಂಬ ಮಾಹಿತಿ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಅರುಣ ಹುಬ್ಬಳ್ಳಿಯಲ್ಲಿ ಇರುತ್ತಿದ್ದ. ಯುವತಿ, ಹಾವೇರಿ ಕಾಲೇಜೊಂದರಲ್ಲಿ ಓದುತ್ತಿದ್ದರು. ಅದೇ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಯಾದ ದೂರುದಾರ, ಯುವತಿ ಜೊತೆ ಸ್ನೇಹ ಬೆಳೆಸಿದ್ದ. ಇಬ್ಬರೂ ಕಂಪ್ಯೂಟರ್ ತರಬೇತಿಗೆ ಒಟ್ಟಿಗೆ ಹೋಗಿ ಬರುತ್ತಿದ್ದರು. ಈ ವಿಷಯ ತಿಳಿದ ಅರುಣ, ಯುವತಿಯಿಂದ ದೂರುದಾರರ ಮೊಬೈಲ್ ನಂಬರ್ ಪಡೆದುಕೊಂಡಿದ್ದ’ ಎಂದು ತಿಳಿಸಿದರು.
ಮಾತುಕತೆಗೆ ಕರೆದು ಅಪಹರಣ: ‘ದೂರುದಾರರಿಗೆ ಕರೆ ಮಾಡಿದ್ದ ಅರುಣ, ಕಾಲೇಜೊಂದರ ಬಳಿ ಕರೆಸಿಕೊಂಡಿದ್ದ. ಸ್ಥಳದಲ್ಲಿದ್ದ ಇತರೆ ಆರೋಪಿಗಳ ಜೊತೆಯಲ್ಲಿ ದೂರುದಾರರನ್ನು ಅಪಹರಣ ಮಾಡಿಕೊಂಡು ಬಾರ್ವೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿಯೇ ದೂರುದಾರರ ಮೇಲೆ ಹಲ್ಲೆ ಮಾಡಿದ್ದರು. ನಂತರ, ದೇವಿಹೊಸೂರು ರಸ್ತೆ ಬಳಿ ಕರೆದೊಯ್ದು ಕೋಲುಗಳಿಂದ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಹೊಡೆದಿದ್ದರು. ಮೊಬೈಲ್ ಸಹ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದರು’ ಎಂದು ಹೇಳಿದರು.
‘ತನ್ನ ಪ್ರೇಯಸಿ ಜೊತೆ ಸುತ್ತಾಡುತ್ತಿದ್ದನೆಂಬ ಕಾರಣಕ್ಕೆ ದೂರುದಾರನ ಮೇಲೆ ಹಲ್ಲೆ ಮಾಡಲಾಗಿದೆ’ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.