ADVERTISEMENT

ಹಾವೇರಿ: ಕಬ್ಬು ಬೆಳೆಗಾರರ ಸಭೆ ಅ.25ಕ್ಕೆ

ಸಂಗೂರ ಸಕ್ಕರೆ ಕಾರ್ಖಾನೆಯ ಗುತ್ತಿಗೆದಾರರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 10:54 IST
Last Updated 1 ಅಕ್ಟೋಬರ್ 2021, 10:54 IST
ಭುವನೇಶ್ವರ ಶಿಡ್ಲಾಪುರ 
ಭುವನೇಶ್ವರ ಶಿಡ್ಲಾಪುರ    

ಹಾವೇರಿ: ಸಂಗೂರಿನ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯ ಗುತ್ತಿಗೆದಾರರಾದ ಜಿ.ಎಂ.ಶುಗರ್ಸ್‌ ಮತ್ತು ಎನರ್ಜಿ ಸಂಸ್ಥೆಯವರು ಒಪ್ಪಂದಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಕಾರ್ಖಾನೆಯ ರೈತರ ಭವನದಲ್ಲಿ ಅ.25ರಂದು ಕಬ್ಬು ಬೆಳೆಗಾರರ ರೈತರ ಸಭೆಯನ್ನು ಬೆಳಿಗ್ಗೆ 10.30ಕ್ಕೆ ಕರೆದಿದ್ದೇವೆ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2019–20ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ದರ ನಿಗದಿಪಡಿಸಿರುವುದಿಲ್ಲ. 2016–17ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ಟನ್‌ಗೆ ₹130 ಪಾವತಿಸಿಲ್ಲ. ಸುಮಾರು 4 ಲಕ್ಷ ಟನ್‌ಗೆ ಸಂಬಂಧಿಸಿದ ₹5 ಕೋಟಿ ಹಣ ಕೊಡುವುದು ಬಾಕಿ ಇದೆ. ಒಪ್ಪಂದಕ್ಕೆ ವ್ಯತಿರಿಕ್ತವಾಗಿ ವಾರ್ಷಿಕ ಬಾಡಿಗೆ ಹಣದಲ್ಲಿ ಬಡ್ಡಿಯನ್ನು ಕಟಾಯಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಸಂಘದ ಅಧ್ಯಕ್ಷ ಬಸಪ್ಪ ನೆಗಳೂರ ಮತ್ತು ಪ್ರಧಾನ ಕಾರ್ಯದರ್ಶಿ ಗೋಣೆಪ್ಪ ಕರಿಗಾರ ಮಾತನಾಡಿ, ‘ಎಸ್‌ಎಂಪಿ ಆಧಾರದ ಮೇಲೆ ಕಬ್ಬು ಸಾಗಾಣಿಕೆ ಆದ 15 ದಿನಗಳೊಳಗಾಗಿ ರೈತರಿಗೆ ಹಣ ಪಾವತಿಸಿಲ್ಲ. ಕಾರ್ಖಾನೆಯನ್ನು ವಿಸ್ತರಣೆ ಮಾಡುವಾಗ ನಮ್ಮ ಅನುಮತಿ ಇಲ್ಲದೆ ವಿಸ್ತರಣೆ ಮಾಡಿದ್ದಾರೆ. ರೈತರು ಕಬ್ಬು ನಾಟಿ ಮಾಡುವುದಕ್ಕೆ ಬಡ್ಡಿಯಂತೆ ಸಾಲ ನೀಡುತ್ತಿದ್ದಾರೆ. ಆದರೆ ಒಪ್ಪಂದದಲ್ಲಿ ಬಡ್ಡಿ ಆಕರಣೆ ಮಾಡಲು ಅವಕಾಶವಿಲ್ಲ. ಕಬ್ಬು ಬೆಳೆಗಾರರಿಗೆ ಹಾಗೂ ಷೇರುದಾರರಿಗೆ ಪ್ರತಿ ವರ್ಷ ಉಚಿತವಾಗಿ ಸಕ್ಕರೆ ವಿತರಿಸಬೇಕಿದ್ದರೂ, ರೈತರಿಗೆ ಸಕ್ಕರೆ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ರಾಕೇಶ ಸಜ್ಜನರ, ಎಂ.ಎನ್‌.ನಾಯಕ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.