ADVERTISEMENT

ಹಾವೇರಿ | ಗರ್ಭಿಣಿ ಆತ್ಮಹತ್ಯೆ: ಪ್ರಿಯಕರ ಸೆರೆ

ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ: ಉಳಿದ ಆರೋಪಿಗಳ ಬಂಧನಕ್ಕೆ ಬಲೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:53 IST
Last Updated 14 ನವೆಂಬರ್ 2025, 2:53 IST
ಶರತ್
ಶರತ್   

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಸಂಕ್ರಿಪುರದಲ್ಲಿ ನ.7ರಂದು ರಾತ್ರಿ ಸಿಂಧು ಪರಮೇಶಪ್ಪ ಪರಮಣ್ಣನವರ (25) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ, ಯುವತಿಯ ಪ್ರಿಯಕರ ಎನ್ನಲಾದ ಶರತ್ ಸುರೇಶ ನೀಲಪ್ಪನವರ ಎಂಬಾತನನ್ನು ದಾವಣಗೆರೆಯಲ್ಲಿ ಗುರುವಾರ ಬಂಧಿಸಲಾಗಿದೆ.

‘ನನ್ನನ್ನು ಪ್ರೀತಿಸುತ್ತಿದ್ದ ಶರತ್ ನೀಲಪ್ಪನವರ, ಗರ್ಭಿಣಿ ಮಾಡಿ ಮದುವೆಯಾಗದೇ ವಂಚಿಸಿದ್ದಾನೆ’ ಎಂದು ಆರೋಪಿಸಿ ಸಿಂಧು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಣೆಬೆನ್ನೂರು ತಾಲ್ಲೂಕಿನ ಕುದರಿಹಾಳದಲ್ಲಿರುವ ಆರೋಪಿ ಶರತ್ ಮನೆ ಎದುರು ಯುವತಿಯ ಮೃತದೇಹವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಳ್ಳದೆ ರಾಜೀ ಮಾಡಿಸಿದ್ದ ಬಗ್ಗೆ ರಾಣೆಬೆನ್ನೂರು ಗ್ರಾಮೀಣ ಪೊಲೀಸರ ವಿರುದ್ಧವೂ ಆರೋಪ ವ್ಯಕ್ತವಾಗಿತ್ತು.

ಮಧ್ಯ ಪ್ರವೇಶಿಸಿದ್ದ ಪೊಲೀಸ್ ಹಿರಿಯ ಅಧಿಕಾರಿಗಳು, ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಮನವೊಲಿಸಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಿ, ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟಿದ್ದರು. ನಂತರ, ಯುವತಿಯ ಸಹೋದರ ನೀಡಿದ್ದ ದೂರು ಆಧರಿಸಿ ಯುವಕ ಸೇರಿ 11 ಮಂದಿ ವಿರುದ್ಧ ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ADVERTISEMENT

‘ಮರಳು ದಂಧೆಯಲ್ಲಿ ತೊಡಗಿದ್ದ’ ಎನ್ನಲಾದ ಶರತ್, ಯುವತಿಯ ಆತ್ಮಹತ್ಯೆ ಬಳಿಕ ಗ್ರಾಮದಿಂದ ತಲೆಮರೆಸಿಕೊಂಡಿದ್ದ. ದಾವಣಗೆರೆಯಲ್ಲಿ ಪರಿಚಯಸ್ಥರ ಪ್ರದೇಶಗಳಲ್ಲಿ ವಾಸವಿದ್ದ. ಈ ಬಗ್ಗೆ ತಾಂತ್ರಿಕ ಮಾಹಿತಿ ಕಲೆಹಾಕಿದ್ದ ಬ್ಯಾಡಗಿ ಠಾಣೆ ಪೊಲೀಸರು, ದಾವಣಗೆರೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬ್ಯಾಡಗಿ ಠಾಣೆಗೆ ಕರೆತಂದು ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ.

‘ಯುವತಿಯ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರಮುಖ ಆರೋಪಿ ಶರತ್‌ನನ್ನು ಗುರುವಾರ ಬಂಧಿಸಲಾಗಿದೆ’ ಎಂದು ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖ ಆರೋಪಿ ಶರತ್ ಬಂಧನವಾಗುತ್ತಿದ್ದಂತೆ, ಅವರ ತಂದೆ–ತಾಯಿ, ಸಹೋದರಿ ಸೇರಿದಂತೆ ಉಳಿದ 10 ಮಂದಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

‘ಯುವತಿಯನ್ನು ಗರ್ಭಿಣಿ ಮಾಡಿ ಮದುವೆಯಾಗದೆ ವಂಚಿಸಿರುವ ಹಾಗೂ ಹಣದ ಆಮಿಷವೊಡ್ಡಿ ಕೊಲೆ ಬೆದರಿಕೆ ಹಾಕಿರುವ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಕುದರಿಹಾಳದ ಶರತ್ ಸುರೇಶ ನೀಲಪ್ಪನವರ ಹಾಗೂ ಅವರ ತಂದೆ ಸುರೇಶ, ತಾಯಿ ಪುಟ್ಟವ್ವ, ತಂಗಿ ಕಾವ್ಯಾ, ಕುಟುಂಬಸ್ಥರಾದ ಸಚಿನ್, ಚಂದ್ರಪ್ಪ, ರೋಹನ್, ರಾಜಪ್ಪ, ರವಿ ನಾಗಪ್ಪ ಉಪ್ಪಿನ, ಹಾಲಪ್ಪ ಮೈಲಪ್ಪ ಬಿಷ್ಟಣ್ಣನವರ ಹಾಗೂ ಹಲಗೇರಿಯ ಸ್ನೇಹಿತ ಶಿವನಗೌಡ ಶಂಕರಗೌಡ ಕಡೂರ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಶರತ್ ಮಾತ್ರ ಈಗ ಸಿಕ್ಕಿಬಿದ್ದಿದ್ದಾನೆ’ ಎಂದು ಪೊಲೀಸರು ಹೇಳಿದರು.

ಸಹೋದರಿಯಿಂದ ಪರಿಚಯ, ಪ್ರೀತಿ

‘ಆರೋಪಿ ಶರತ್‌ನ ಸಹೋದರಿ ಕಾವ್ಯಾ ಹಾಗೂ ಸಿಂಧು ರಾಣೆಬೆನ್ನೂರಿನ ಕಾಲೇಜೊಂದರಲ್ಲಿ ಬಿ.ಕಾಂ. ಓದುತ್ತಿದ್ದರು. ಅಲ್ಲಿಯೇ ಅವರಿಬ್ಬರು ಸ್ನೇಹಿತರಾಗಿದ್ದರು. ತನ್ನ ಸಹೋದರಿ ಕಾವ್ಯಾ ಜೊತೆಗೆ ಓಡಾಡುತ್ತಿದ್ದ ಸಿಂಧು ಅವರನ್ನು ಶರತ್ ಪರಿಚಯ ಮಾಡಿಕೊಂಡಿದ್ದ. ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಹಲವು ಕಡೆ ಸುತ್ತಾಡಿದ್ದರು. ಮದುವೆಯಾಗುವುದಾಗಿ ಹೇಳಿದ್ದ ಶರತ್ ಲೈಂಗಿಕವಾಗಿ ಬಳಸಿಕೊಂಡಿದ್ದ. ‌‌‌ಸಿಂಧು ಗರ್ಭಿಣಿ ಎಂಬುದಾಗಿಯೂ ಕುಟುಂಬಸ್ಥರು ಆರೋಪಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಾನು ಶ್ರೀಮಂತ. ಶ್ರೀಮಂತ ಹುಡುಗಿಯನ್ನಷ್ಟೇ ಮದುವೆಯಾಗುತ್ತೇನೆ’ ಎಂದಿದ್ದ ಶರತ್ ‘ನೀನು ಕೆರೆ–ಬಾವಿ ನೋಡಿಕೊ’ ಎಂದು ಸಿಂಧುಗೆ ಅವಮಾನ ಮಾಡಿದ್ದ. ಶರತ್ ವಿರುದ್ಧ ದೂರು ನೀಡಲು ಸಿಂಧು ಅವರು ಅಕ್ಟೋಬರ್ 25ರಂದು ಬೆಳಿಗ್ಗೆ 10 ಗಂಟೆಗೆ ರಾಣೆಬೆನ್ನೂರು ಗ್ರಾಮೀಣ ಠಾಣೆಗೆ ಹೋಗಿದ್ದರು. ಠಾಣೆಗೆ ಬಂದಿದ್ದ ಶರತ್ ತಂದೆ ಹಾಗೂ ಇತರರು ಸಿಂಧು ಹಾಗೂ ಅವರ ಪೋಷಕರನ್ನು ಠಾಣೆಯಿಂದ ಹೊರಗೆ ಕರೆತಂದಿದ್ದರು.

‘ಹಣ ಕೊಡುತ್ತೇವೆ. ಇಲ್ಲಿಂದ ಹೊರಟು ಹೋಗಿ. ದೂರು ಕೊಟ್ಟರೆ ಜೀವಂತ ಬಿಡುವುದಿಲ್ಲ’ ಎಂದು ಬೆದರಿಕೆಯೊಡ್ಡಿದ್ದರು. ಮೊಬೈಲ್ ಕಸಿದುಕೊಂಡು ಎಲ್ಲ ಸಂದೇಶ ಹಾಗೂ ಫೋಟೊಗಳನ್ನು ಅಳಿಸಿಹಾಕಿದ್ದರು. ಇದರಿಂದ ಹೆದರಿ ಮನೆಗೆ ಹೋಗಿದ್ದ ಯುವತಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.