
ತಡಸ: ರೈತರ ಹೊಲ ಗದ್ದೆಗಳ ದಾರಿ ಸಮಸ್ಯೆ ಹಾಗೂ ಕಂದಾಯ ಗ್ರಾಮಗಳ ಪಟ್ಟಾ ನೀಡುವ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.
ಹತ್ತಿರದ ಕುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರ್ಲಗಟ್ಟ, ಮಮದಾಪೂರ, ಅಡವಿ ಸೋಮಾಪೂರ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ₹ 90 ಲಕ್ಷ ಕುನ್ನೂರು ಪಂಚಾಯತಿಗೆ ನೀಡಿದ್ದೇನೆ. ತರ್ಲಗಟ್ಟ ಗ್ರಾಮವು ಹಲವಾರು ವರ್ಷಗಳಿಂದ ಗ್ರಾಮಸ್ಥರು ಕಂದಾಯ ಗ್ರಾಮವಾಗದೆ ಮೂಲಸೌಕರ್ಯ ಜನರಿಗೆ ಸಿಗದಂತೆ ಆಗಿತ್ತು. ಇಂದು ಮಮದಾಪೂರ ಎಂಬ ಹೊಸ ಕಂದಾಯ ಗ್ರಾಮವಾಗಿ ಮರು ನಾಮಕರಣ ಮಾಡಲಾಗಿದೆ ಎಂದರು.
ಮಮದಾಪೂರ ಹಾಗೂ ಕುನ್ನುರು ಗ್ರಾಮದ ರೈತರ ಹೊಲ ಗದ್ದೆಗಳ ರಸ್ತೆಯ ಸಮಸ್ಯೆ ಇದ್ದು ಮುಖ್ಯಮಂತ್ರಿ ವಿಶೇಷ ಅನುದಾನ ಪಡೆದು ‘ನಮ್ಮ ಹೊಲ ನಮ್ಮ ದಾರಿ’ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಗ್ರಾಮಗಳಲ್ಲಿ ವಿವಿಧ ದೇವಸ್ಥಾನಕ್ಕೆ ಸಭಾ ಭವನ ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ ಎಂದರು.
‘ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಇಂದಿರಾ ಕಿಟ್ ನೀಡಲಾಗುವುದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ 6 ಕೆಪಿಸಿ ಶಾಲೆ ತಾಲ್ಲೂಕಿಗೆ ತರಲಾಗಿದೆ ಎಂದರು.
ತರ್ಲಗಟ್ಟ ಗ್ರಾಮಸ್ಥರು 25 ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆ ವಶಪಡಿಸಿಕೊಂಡು ಹಲವಾರು ರೈತರು ಜಮೀನು ಕಳೆದುಕೊಂಡು ಕೊಲಿ ಕೆಲಸ ಮಾಡುತ್ತಿದ್ದೇವೆ. ಜಮೀನು ಮರಳಿಸುವಂತೆ ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಬಾಬರ್ ಬಾವುಜಿ, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಆರ್.ಬೊಮ್ಮನಹಳ್ಳಿ, ಲಕ್ಷ್ಮಣ್ ಬೆಂಡಲ್ಗಟ್ಟಿ, ಗಂಗವ್ವ ಲಮಾಣಿ, ಬಂಜಾರ ಸಮಿತಿಯ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಲಾವನಗೌಡ ಪಾಟೀಲ್, ಆನಂದ ಲಮಾಣಿ, ಬಾಹುಬಲಿ ಸೊಗಲಿ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.