ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗೊಂದಲಗಳಿಲ್ಲ: ಸಚಿವ ಬಿ.ಸಿ. ನಾಗೇಶ

‘ಕರ್ನಾಟಕ ವೈಭವ- 2022’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 2:25 IST
Last Updated 29 ಅಕ್ಟೋಬರ್ 2022, 2:25 IST
ರಾಣೆಬೆನ್ನೂರು ತಾಲ್ಲೂಕಿನ ಕಮದೋಡ ಗ್ರಾಮದ ರೇನಬೋ ಸ್ಕೂಲಿನಲ್ಲಿ ಪರಿವರ್ತನ ರಾಣೆಬೆನ್ನೂರು ಏರ್ಪಡಿಸಿದ್ದ ಜ್ಞಾನ ವೈಭವ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಚಾಲನೆ ನೀಡಿದರು
ರಾಣೆಬೆನ್ನೂರು ತಾಲ್ಲೂಕಿನ ಕಮದೋಡ ಗ್ರಾಮದ ರೇನಬೋ ಸ್ಕೂಲಿನಲ್ಲಿ ಪರಿವರ್ತನ ರಾಣೆಬೆನ್ನೂರು ಏರ್ಪಡಿಸಿದ್ದ ಜ್ಞಾನ ವೈಭವ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಚಾಲನೆ ನೀಡಿದರು   

ರಾಣೆಬೆನ್ನೂರು: ‘ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ಗುಣಮಟ್ಟದ ಶಿಕ್ಷಣ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ. ಯಾವುದೇ ಶಾಲೆ ಆಡಳಿತ ಮಂಡಳಿ ಮುಂದೆ ಬಂದರೆ ಅಗತ್ಯ ಸೌಲಭ್ಯಗಳನ್ನು ನೀಡುತ್ತೇವೆ. ಸಮರ್ಪಕವಾಗಿ ಮುಂದಿನ ವರ್ಷ ಅನುಷ್ಠಾನಕ್ಕೆ ತರುತ್ತೇವೆ’ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.

ತಾಲ್ಲೂಕಿನ ಕಮದೋಡ ಗ್ರಾಮದ ರೇನ್‌ಬೋ ಸ್ಕೂಲಿನಲ್ಲಿ ಪರಿವರ್ತನ ರಾಣೆಬೆನ್ನೂರು ಶುಕ್ರವಾರ ಏರ್ಪಡಿಸಿದ್ದ ‘ಕರ್ನಾಟಕ ವೈಭವ- 2022’ ಜ್ಞಾನ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಜಾರಿಗೆ ತಂದಿಲ್ಲ. ಹಿರಿಯರಾದ ಕಸ್ತೂರಿರಂಗನ್‌ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ ತಜ್ಞರ ಜೊತೆ ಸಾಧಕ– ಬಾಧಕ ಚರ್ಚಿಸಿ ಜಾರಿಗೆ ತರಲಾಗಿದೆ. 2 ಲಕ್ಷ ಜನರು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದರು.

ADVERTISEMENT

2014ರಲ್ಲಿ ದೇಶದಲ್ಲಿ ಮೊದಲು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಇಚ್ಛೆಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಥಮವಾಗಿ ಹೊಸ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ನಲಿ– ಕಲಿ, ಚಿಲಿಪಿಲಿ ಯೋಜನೆಗಳು ಪ್ರಾರಂಭದಲ್ಲಿದ್ದು ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಹಳೆ ಪಿಂಚಣಿ ಯೋಜನೆ ಜಾರಿಗೆ ಕುರಿತು ಪ್ರಶ್ನಿಸಿದಾಗ, ಶಿಕ್ಷಣ ಇಲಾಖೆ ಒಂದೇ ಅಲ್ಲ. ಸರ್ಕಾರದ ಎಲ್ಲ ಇಲಾಖೆಗಳ ವ್ಯಾಪ್ತಿಗೆ ಬರುತ್ತದೆ. ಅನೇಕ ಶಿಕ್ಷಕ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಹಳೆ ಪಿಂಚಣಿ ಯೋಜನೆ ಎರಡು ಮೂರು ರಾಜ್ಯಗಳು ಜಾರಿಗೆ ತಂದರೂ ಅವರಿಗೂ ಸಾಕಷ್ಟು ತೊಂದರೆಗೀಡಾಗಿದ್ದಾರೆ. ನೀವು ನೌಕರಿಗೆ ಸೇರುವಾಗ ಹೊಸ ಪಿಂಚಣಿ ಯೋಜನೆ ಬಗ್ಗೆ ಮೊದಲೇ ತಿಳಿಸಿದ್ದೇವೆ ಎಂದರು.

ಪಾಲಕರು ಮಕ್ಕಳಿಗೆ ನಾಡು– ನುಡಿ, ನೆಲ– ಜಲದ ಬಗ್ಗೆ ಅರಿವು ಮೂಡಿಸಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯಕ್ರಮ ವೀಕ್ಷಿಸಿ ಮಕ್ಕಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಮಧ್ಯ ಕ್ಷೇತ್ರದ ಪ್ರಜ್ಞಾ ಪ್ರವಾಹ ರಘುನಂದನಜಿ ಆಶಯ ಭಾಷಣ ಮಾಡಿದರು. ಶಾಸಕ ಅರುಣಕುಮಾರ ಎಂ. ಗುತ್ತೂರು ಹಾಗೂ ಪರಿವರ್ತನ ರಾಣೆಬೆನ್ನೂರು ಅಧ್ಯಕ್ಷ ಡಾ.ಎಸ್‌.ಜಿ. ವೈದ್ಯ ಮಾತನಾಡಿದರು.

ರೇನಬೋ ವಸತಿ ಶಾಲೆ ಅಧ್ಯಕ್ಷ ಡಾ.ಸುರೇಶ ಸಿ.ಟಿ, ಲಲಿತಾ ಸುರೇಶ, ಸುಮಾ ಉಪ್ಪಿನ, ಉಪನಿರ್ದೇಶಕ ಜಗದೀಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್‌. ಪಾಟೀಲ, ಶ್ರೀಧರ್‌ ಎನ್‌, ಅಂಬಿಗೇರ, ಡಾ.ನಾರಾಯಣ ಪವಾರ, ಭಾರತಿ ಜಂಬಿಗಿ, ಭಾರತಿ ಅಳವಂಡಿ, ಕೆ.ಶಿವಲಿಂಗಪ್ಪ, ರುಕ್ಮಿಣಿ ಸಾವುಕಾರ, ಕೆ.ಎನ್‌. ಪಾಟೀಲ, ಡಾ.ಗಣೇಶ ದೇವರಗಿರಿಮಠ, ಪಾಟೀಲ, ಜಿ.ಜಿ. ಹೊಟ್ಟಿಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.