ಗುತ್ತಲ: ಇಲ್ಲಿಗೆ ಸಮೀಪದ ಮೇವುಂಡಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸಲು ಹಟ್ಟಿ ಚಿನ್ನದ ಗಣಿಗೆ ಐದು ವರ್ಷಗಳ ಕಾಲ ಟೆಂಡರ್ ಮೂಲಕ ಪರವಾನಿಗೆ ನೀಡಲಾಗಿದೆ.
ಸರ್ಕಾರ ಪರವಾನಿಗೆ ನೀಡುವಾಗ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸಲು ಯಂತ್ರೋಪಕರಣ ಬಳಕೆ ಮಾಡಬಾರದೆಂದು ಆದೇಶ ನೀಡಿದೆ ಎಂಬುದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ನದಿಯಿಂದ ಮರಳನ್ನು ತೆಗೆದು ಸಂಗ್ರಹ ಕೇಂದ್ರದಲ್ಲಿ ಸಂಗ್ರಹಿಸಿ ಅಲ್ಲಿಂದ ಮಾರಾಟ ಮಾಡಬೇಕೆಂದು ಸರ್ಕಾರ ಆದೇಶವಿದೆ. ನದಿಯಲ್ಲಿ ಯಾವುದೇ ಕಾರಣಕ್ಕೂ ಜೆಸಿಬಿ ಮತ್ತು ಹಿಟ್ಯಾಚಿ ಯಂತ್ರೋಪಕರಣ ಬಳಕೆ ಮಾಡಬಾರದು ಎನ್ನುವ ಸರ್ಕಾರ ಮತ್ತು ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶವಿದ್ದರೂ ಮರಳು ಗಣಿಗಾರಿಕೆ ನಡೆಸುವವರು ಈ ಆದೇಶವನ್ನು ಗಾಳಿಗೆ ತೂರಿ ಮನಬಂದತೆ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ.
ಮರಳು ಸಂಗ್ರಹ ಕೇಂದ್ರವನ್ನು ಚಾಲನೆ ಮಾಡಿ ಕೇಲವು ದಿನಗಳ ಕಾಲ ಮಾತ್ರ ಕೇಂದ್ರದಿಂದ ಮಾರಾಟ ಮಾಡಲಾಯಿತು. ಎರಡು ತಿಂಗಳದಿಂದ ನಿರಂತರವಾಗಿ ನದಿಯಲ್ಲಿ ಜೆಸಿಬಿ ಮತ್ತು ಹಿಟ್ಯಾಚ್ಚಿ ಬಳಸಿ ಟಿಪ್ಪರ್ ಮತ್ತು ಲಾರಿಗಳಿಗೆ ಮರಳನ್ನು ಮಾರಾಟ ಮಾಡಿದ್ದಾರೆಂದು ಗ್ರಾಮದ ಹೆಸರು ಹೇಳದ ವ್ಯಕ್ತಿ ಆರೋಪಿಸಿದ್ದಾರೆ.
ಅಧಿಕಾರಿಗಳ ಸಹಕಾರದಿಂದ ನದಿಯಲ್ಲಿ ಯಂತ್ರೋಪಕರಣ ಬಳಕೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
‘ಹಟ್ಟಿ ಚಿನ್ನದ ಗಣಿಯವರಿಗೆ ಮರಳು ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಆದರೆ ನದಿಯಲ್ಲಿ ಯಂತ್ರೋಪಕರಣ ಬಳಕೆ ಮಾಡಬಾರದೆಂದು ಹೇಳಿದ್ದೆವೆ. ಅವರು ಸಹ ಬಳಕೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಯಂತ್ರೋಪಕರಣ ಬಳಕೆ ಮಾಡಿರುವ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಕೂಡಲೇ ತುಂಗಭದ್ರ ನದಿಯಲ್ಲಿ ಗುತ್ತಿಗೆ ನೀಡಿದ ಸ್ಥಳವನ್ನು ಪರಿಶೀಲನೆ ಮಾಡಿ ಕ್ರಮ ಜರಿಗಿಸಲಾಗುವುದು‘ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಷ್ಮಾ.ಬಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.