ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ಕಾಕೋಳ ಗ್ರಾಮದ ಸೇತುವೆ ಸಮೀಪ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ದಾವಣಗೆರೆಯ ರಂಗ ಕಲಾವಿದೆಯರಾದ ಯು.ಮಂಜುಳಾ (40) ಹಾಗೂ ಗೀತಾ (34) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಭಾನುವಾರ ಸಂಜೆ ಲಾರಿಗೆ ಕಾರು ಗುದ್ದಿ ಅಪಘಾತ ಸಂಭವಿಸಿದೆ. ಇನ್ನಿಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಈ ರಂಗ ಕಲಾವಿದೆಯರು ದಾವಣಗೆರೆಯಿಂದ ಅಂಕೋಲಾಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಜುಳಾ ಮತ್ತು ಗೀತಾ ಇಬ್ಬರೂ ದಾವಣಗೆರೆಯ ಕೆ.ಬಿ.ಆರ್. ಡ್ರಾಮಾ ಕಂಪನಿ ಕಲಾವಿದೆಯರಾಗಿದ್ದರು. ಜತೆಗೆ ದಾವಣಗೆರೆಯ ಎಲ್ಲ ಆರ್ಕೆಸ್ಟ್ರಾ ಕಂಪನಿಗಳಲ್ಲಿ ನೃತ್ಯ ಕಲಾವಿದರಾಗಿ ಭಾಗವಹಿಸುತ್ತಿದ್ದರು. ದಾವಣ ಗೆರೆಯ ವಿನೋಬನಗರದ ನಿವಾಸಿಗಳಾಗಿದ್ದರು. ಮಂಜುಳಾ ಅವರ ತಾಯಿ ವಿಜಯಮ್ಮ, ಗೀತಾ ಅವರ ಹೆತ್ತವರಾದ ಗಣೇಶ್ ಮತ್ತು ಮಂಜುಳಾ ಎಲ್ಲರೂ ಕಲಾವಿದರಾಗಿದ್ದರು ಎಂದು ಕೆ.ಬಿ.ಆರ್.ಡ್ರಾಮಾ ಕಂಪನಿಯ ಚಿಂದೋಡಿ ಶಂಭುಲಿಂಗಪ್ಪ ಮಾಹಿತಿ ನೀಡಿದ್ದಾರೆ.
ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.