ADVERTISEMENT

ಕಾರ್ಮಿಕರಿಗೆ ಬೆವರಿನ ಪಾಲು ಸಿಗಲಿ: ಬಸವರಾಜ ಭೋವಿ

​ಪ್ರಜಾವಾಣಿ ವಾರ್ತೆ
Published 1 ಮೇ 2021, 14:16 IST
Last Updated 1 ಮೇ 2021, 14:16 IST
ಹಾವೇರಿಯ ಕೆ.ಪಿ.ಟಿ.ಸಿ.ಎಲ್ ಸಮುದಾಯ ಭವನದ ಆವರಣದಲ್ಲಿರುವ ಕಾರ್ಮಿಕ ಸ್ಮಾರಕಕ್ಕೆ ಶನಿವಾರ ವಿವಿಧ ಸಂಘಟನೆಗಳ ಮುಖಂಡರು ಪುಷ್ಪ ನಮನ ಸಲ್ಲಿಸಿದರು 
ಹಾವೇರಿಯ ಕೆ.ಪಿ.ಟಿ.ಸಿ.ಎಲ್ ಸಮುದಾಯ ಭವನದ ಆವರಣದಲ್ಲಿರುವ ಕಾರ್ಮಿಕ ಸ್ಮಾರಕಕ್ಕೆ ಶನಿವಾರ ವಿವಿಧ ಸಂಘಟನೆಗಳ ಮುಖಂಡರು ಪುಷ್ಪ ನಮನ ಸಲ್ಲಿಸಿದರು    

ಹಾವೇರಿ: ವಿಶ್ವ ಕಾರ್ಮಿಕ ದಿನಾಚರಣೆಯ ದಿನದ ಅಂಗವಾಗಿ ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದ) ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ), ಸಿಐಟಿಯು ಕಾರ್ಮಿಕ ಸಂಘಟನೆ ವತಿಯಿಂದ ಹಾವೇರಿಯ ಕೆ.ಪಿ.ಟಿ.ಸಿ.ಎಲ್ ಸಮುದಾಯ ಭವನದ ಆವರಣದಲ್ಲಿರುವ ಕಾರ್ಮಿಕ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

ಎಸ್ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ‘ಜಗತ್ತಿನ ಎಲ್ಲಾ ದೇಶಗಳ ದುಡಿಯುವ ಜನ ಆಚರಿಸುವ ಹೆಮ್ಮೆಯ ದಿನವೇ ‘ಕಾರ್ಮಿಕ ದಿನ’. ದೇಶ, ಭಾಷೆ, ಧಮ೯ಗಳ, ಗಡಿಗಳ ಅಡೆತಡೆ ಇಲ್ಲದೆ ಆಚರಿಸಲಾಗುತ್ತಿದೆ. ವಿಶ್ವದ ಕಾಮಿ೯ಕರೆಲ್ಲ ಒಂದೇ ಎಂಬ ಸಂದೇಶದ ಪರಂಪರೆಯನ್ನು ಎತ್ತಿ ಹಿಡಿಯುವಂತಾಗಿದೆ ಎಂದರು.

‘ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ರಾಜ್ಯದ ಸಂಘಟಿತ ಅಸಂಘಟಿತ ವರ್ಗಗಳ ನೌಕರರು, ಪೌರಕಾರ್ಮಿಕರು, ಬೀಡಿ, ಹಮಾಲಿ, ಗುತ್ತಿಗೆ, ಹೊರಗುತ್ತಿಗೆ ಹಾಗೂ ವಲಸೆ ಕಾರ್ಮಿಕರು ಎದುರಿಸಬಹುದಾದ ಸಂಕಷ್ಟಗಳನ್ನು ಅರಿತು ರಾಜ್ಯ ಸರ್ಕಾರ ಕೂಡಲೇ ಈ ವಿಭಾಗದ ಕಾರ್ಮಿಕರ ಬದುಕಿನ ರಕ್ಷಣೆಗಾಗಿ ‘ಆರ್ಥಿಕ ಪ್ಯಾಕೇಜ್’ ಘೋಷಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಿಪಿಎಂ ಪಕ್ಷದ ಹಿರಿಯ ಮುಖಂಡ ರುದ್ರಪ್ಪ ಜಾಬೀನ್ ಮಾತಾನಾಡಿ, ‘ಕಾರ್ಮಿಕರ ಏಕತೆ, ಸಮಗ್ರತೆಯ ರಕ್ಷಣೆಗಾಗಿ ಕೋಮುವಾದಿ ಶಕ್ತಿಗಳನ್ನು ಪ್ರತಿನಿಧೀಕರಿಸುವ ಸರ್ಕಾರವನ್ನು ಮೂಲೆಗುಂಪು ಮಾಡಲು ಹಾಗೂ ಖಾಸಗೀಕರಣ, ಬೆಲೆ ಏರಿಕೆ ನೀತಿಗಳನ್ನು ಹಿಮ್ಮೆಟ್ಟಿಸುವ ಹೋರಾಟದ ಸ್ಫೂರ್ತಿಯೊಂದಿಗೆ ಮುನ್ನಡೆಯೋಣ’ ಎಂದರು.

ಸಿಐಟಿಯು ಹೆಸ್ಕಾಂ ನೌಕರರ ಮುಖಂಡರಾದ ಚಂದ್ರು ಬೆನಕನಹಳ್ಳಿ, ಎ.ಕೆ.ಯಮನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.