ಹಾನಗಲ್: ‘ಪಾಶ್ಚಿಮಾತ್ಯರಿಗೆ ಹಿಂದೂ ಧರ್ಮದ ಸಿದ್ಧಾಂತಗಳು ಒಪ್ಪಿಗೆಯಾಗುತ್ತಿವೆ. ಭಾರತೀಯರು ಇದನ್ನು ಅರಿಯಬೇಕು. ಯುವ ಸಮೂಹವನ್ನು ಧರ್ಮಾಚರಣೆಗೆ ಅಣಿಗೊಳಿಸಬೇಕು. ಈಗ ಹಿಂದೂಗಳು ಒಗ್ಗಟ್ಟಾಗಿಲ್ಲದಿದ್ದರೆ, ಪಶ್ಚಾತಾಪ ಪಡಬೇಕಾಗುತ್ತದೆ’ ಎಂದು ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ನುಡಿದರು.
ಇಲ್ಲಿನ ಕುಮಾರೇಶ್ವರ ವಿರಕ್ತಮಠದಲ್ಲಿ ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ್ ಮಂಗಳವಾರ ಆಯೋಜಿಸಿದ ಹಿಂದೂ ಧರ್ಮ ಧ್ವಜ ಆಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ತಾಯಂದಿರು ಮಕ್ಕಳಿಗೆ ಧರ್ಮದ ಸಂಸ್ಕಾರ ನೀಡಬೇಕು. ಧರ್ಮದ ದುರುಪಯೋಗವನ್ನು ಸಹಿಸಬೇಡಿ. ಹಿಂದೂಗಳು ಒಗ್ಗಟ್ಟಾಗಿರೋಣ’ ಎಂದರು.
ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ಮಾತನಾಡಿ, ‘ತಾಲ್ಲೂಕಿನ 2,500ಕ್ಕೂ ಅಧಿಕ ಮಠ, ಮಂದಿರಗಳಿಗೆ ಹಿಂದೂ ಧರ್ಮದ ಭಗವಾಧ್ವಜ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇದು ಪ್ರತಿ ವರ್ಷ ಯುಗಾದಿ ಹಾಗೂ ವಿಜಯದಶಮಿಯಂದು ಎರಡು ಬಾರಿ ನಡೆಯುತ್ತದೆ. ಇದರ ಪೂರ್ಣ ಜವಾಬ್ದಾರಿಯನ್ನು ನಮ್ಮ ಟ್ರಸ್ಟ್ ವಹಿಸುತ್ತದೆ’ ಎಂದರು.
ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು, ಹೋತನಹಳ್ಳಿ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ, ಹೇರೂರು ಸುಕ್ಷೇತ್ರ ಗುಬ್ಬಿಮಠದ ಗುಬ್ಬಿನಂಜುಂಡೇಶ್ವರ ಪಂಡಿತಾರಾಧ್ಯ ಶಿವಾಚಾರ್ಯರು, ಕೂಸನೂರಿನ ತಿಪ್ಪಾಯಿಸ್ವಾಮಿ ಆಶ್ರಮದ ಜ್ಯೋತಿರ್ಲಿಂಗ ಸ್ವಾಮೀಜಿ, ಹುಬ್ಬಳ್ಳಿ-ಗುಂಡೂರು ಸೇವಾಲಾಲ ವಂಜಾರ ಗುರುಪೀಠದ ತಿಪ್ಪೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಣ್ಯರಾದ ಎ.ಎಸ್.ಬಳ್ಳಾರಿ ಇದ್ದರು.
ಬಳಿಕ ಗಾಂಧಿ ವೃತ್ತ ಸಮೀಪದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿ ತಾಲ್ಲೂಕಿನ ವಿವಿಧ ಮಠ ಮಂದಿರಗಳಿಗೆ ಭಗವಾಧ್ವಜಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.