ವಾಡಿ: ಏಷಿಯಾದಲ್ಲಿಯೇ ಅತಿದೊಡ್ಡ ಸಿಮೆಂಟ್ ಕಂಪನಿ ಹೊಂದಿರುವ ವಾಡಿ ಪಟ್ಟಣ, ಮುಂಬೈ, ಬೆಂಗಳೂರು, ಚೆನ್ನೈ, ಹೈದ್ರಾಬಾದ್ ನಂತಹ ಮಹಾನಗರಗಳಿಗೆ ನೇರವಾಗಿ ರೈಲ್ವೆ ಸಂಪರ್ಕ ಹೊಂದಿದೆ. ಸಹಜವಾಗಿ ಇಲ್ಲಿನ ರೈಲು ನಿಲ್ದಾಣದ ಮೂಲಕ ನಿತ್ಯ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ರೈಲ್ವೆ ಇಲಾಖೆ ಮಾತ್ರ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯವಾದ ಮೇಲ್ಸೇತುವೆ ಕಲ್ಪಿಸದಿರುವುದು ಸಾರ್ವಜನಿಕರ ಅಸಮಾನಧಾನಕ್ಕೆ ಕಾರಣವಾಗಿದೆ.
1874ರಲ್ಲಿ ನಿಜಾಮ ಸರ್ಕಾರದಿಂದ ನಿರ್ಮಾಣ ಮಾಡಿದ ರೈಲು ನಿಲ್ದಾಣಕ್ಕೆ ಇಲ್ಲಿಯವರೆಗೂ ಪ್ರವೇಶದ್ವಾರ ನಿರ್ಮಿಸಿಲ್ಲ. ಇದರಿಂದಾಗಿ ನಿತ್ಯ ಸಂಚರಿಸುವ ವೃದ್ಧರು, ಗರ್ಭಿಣಿಯರು, ಅಂಗವಿಕಲರು, ಮಕ್ಕಳು ಮೇಲ್ಸೇತುವೆ ಮೂಲಕ ರೈಲ್ವೆ ನಿಲ್ದಾಣಕ್ಕೆ ಹೋಗುವುದು ಅನಿವಾರ್ಯವಾಗಿದೆ.
ಮೇಲ್ಸೇತುವೆ ದಾಟಲಾಗದೇ ಅಡ್ಡದಾರಿಯ ಮೂಲಕ ಹಳಿಗಳನ್ನು ದಾಟಲು ಮುಂದಾಗುವ ಪ್ರಯಾಣಿಕರ ಜೀವಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ವಾಡಿ ಜಂಕ್ಷನ್ ಸೆಂಟ್ರಲ್ ರೈಲ್ವೆ ಸೊಲ್ಲಾಪುರ ವಿಭಾಗಕ್ಕೆ ಒಳಪಟ್ಟಿದೆ. ಇಲಾಖೆಗೆ ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ಲಾಭವಿದೆ. ಪ್ರಯಾಣಿಕರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿಫಲವಾಗಿದ್ದು, ನಾಗರಿಕರ ಬೇಸರಕ್ಕೆ ಕಾರಣವಾಗಿದೆ.
4 ಪ್ಲಾಟ್ಫಾರ್ಮ್ಗಳು ಹಾಗೂ ಹತ್ತಾರು ಗೂಡ್ಸ್ ಗಾಡಿಗಳ ನಿಲುಗಡೆಯ ವಾರ್ಡ್ಗಳನ್ನು ಹೊಂದಿದೆ. ರಾಜ್ಯದಲ್ಲಿಯೇ ಅತಿದೊಡ್ಡ ಜಂಕ್ಷನ್ಗಳಲ್ಲಿ ಇದು ಒಂದಾಗಿದೆ.
ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಹಲವು ಜನಪ್ರತಿನಿಧಿಗಳು ಇಲ್ಲಿಗೆ ಬಂದು ಹೋದರೂ ರೈಲು ನಿಲ್ದಾಣದ ಸಮಸ್ಯೆ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. 5ನೇ ಪ್ಲಾಟ್ಫಾರ್ಮ್ ನಿರ್ಮಿಸಬೇಕು ಹಾಗೂ ರೈಲು ನಿಲ್ದಾಣಕ್ಕೆ ಪ್ರವೇಶದ್ವಾರ ನಿರ್ಮಿಸಬೇಕು ಎಂದು ಹಲವು ವರ್ಷಗಳ ಬೇಡಿಕೆ ಇದೆ. ಇದಕ್ಕಾಗಿ ಈ ಹಿಂದೆ ಹಲವು ಹೋರಾಟಗಳು ಮಾಡಲಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿರುವ ರೈಲು ನಿಲ್ದಾಣಕ್ಕೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಆರ್ ಕೆ ವೀರಭದ್ರಪ್ಪಾ ಆರ್.ಕೆ. ಎಸ್ಯುಸಿಐ ಮುಖಂಡರು,
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಶತಮಾನಗಳು ಕಳೆದರೂ ಪ್ರವೇಶದ್ವಾರದಂತಹ ಕನಿಷ್ಠ ಸೌಲಭ್ಯ ಒದಗಿಸಿಲ್ಲ. ವಾರ್ಷಿಕ ಕೋಟ್ಯಾಂತರ ಲಾಭ ಬಾಚಿಕೊಳ್ಳುವ ಇಲಾಖೆ, ತಕ್ಷಣವೇ ಪ್ರವೇಶದ್ವಾರ ವ್ಯವಸ್ಥೆ ಕಲ್ಪಿಸಬೇಕು.
**
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ಪ್ರಯಾಣಿಕರು. ಪ್ರವೇಶದ್ವಾರದಂತಹ ಕನಿಷ್ಠ ಸೌಲಭ್ಯ ಒದಗಿಸಿಲ್ಲ
– ವೀರಭದ್ರಪ್ಪ.ಆರ್.ಕೆ, ಎಸ್ಯುಸಿಐ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.