ವಾಡಿ: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಗ್ರಾಮಾಂತರ ಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳಿಗೆ ಗುಣಮಟ್ಟದ, ಮೌಲ್ಯಧಾರಿತ ಶಿಕ್ಷಣ ನೀಡುವ ಜೊತೆಗೆ ಪೌಷ್ಟಿಕ ಆಹಾರ ಒದಗಿಸಬೇಕೆಂಬ ಉದ್ದೇಶದಿಂದ 2 ವರ್ಷಗಳ ಹಿಂದೆ ಪಟ್ಟಣ ಸಮೀಪದ ಕೊಂಚೂರು ಗ್ರಾಮದ ದಿಗ್ಗಿ ತಾಂಡಾದ ಹತ್ತಿರ ಏಕಲವ್ಯ ವಸತಿಶಾಲೆ ನಿರ್ಮಿಸಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮೇಲ್ವಿಚಾರಕರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ವಸತಿಶಾಲೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿದಿನ ಮಕ್ಕಳಿಗೆ ಕ್ರಮದ ಪ್ರಕಾರ ಆಹಾರ ನೀಡಲು ಸರ್ಕಾರ ಪ್ರತಿ ವಿದ್ಯಾರ್ಥಿಗೆ ಪ್ರತಿದಿನ ₹40 ಖರ್ಚು ಮಾಡುತ್ತಿದೆ. ತರಕಾರಿಗಳು, ಬೆಳೆಕಾಳುಗಳು ಸೇರಿದಂತೆ ಇನ್ನಿತರ ಅವಶ್ಯಕ ಪೌಷ್ಟಿಕ ಅಹಾರ ಒದಗಿಸಿ ಮಕ್ಕಳ ಸುಸ್ಥಿರ ಆರೋಗ್ಯ ಕಾಪಾಡಬೇಕು ಎನ್ನುವುದು ಸರ್ಕಾರದ ಸದಾಶಯ. ಆದರೆ, ಇಲ್ಲಿನ ವಸತಿಶಾಲೆಯ ಮೇಲ್ವಿಚಾರಕರ ನಿಷ್ಕಾಳಜಿಯಿಂದ ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊಳೆತ ತರಕಾರಿ ಬಳಸಿ ಅಡುಗೆ ತಯಾರಿಸಲಾಗುತ್ತಿದ್ದು, ಗುಣಮಟ್ಟದ ಆಹಾರ ನೀಡುತ್ತಿಲ್ಲ. ಸ್ವಚ್ಛತೆ ಇಲ್ಲದ ಅಡುಗೆ ಮನೆ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ತರಕಾರಿರಹಿತ ತಿಳಿಸಾಂಬಾರು, ಅರೆಬೆಂದ ಅನ್ನ ನೀಡಲಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪೋಷಕರು ಅಳಲು ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷರ ಭೇಟಿ: ವಸತಿಶಾಲೆಯ ಬಿಸಿಯೂಟ ಅವ್ಯವಸ್ಥೆ ಕುರಿತು ವ್ಯಾಪಕ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಲಾಡ್ಲಾಪುರ ಗ್ರಾ.ಪಂ ಅಧ್ಯಕ್ಷ ಸಾಬಣ್ಣ ಆನೇಮಿ ಸೋಮವಾರ ವಸತಿಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
‘ಬಿಸಿಯೂಟ ಕೋಣೆಯ ನೈರ್ಮಲ್ಯವಿಲ್ಲದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡಬೇಡಿ. ಕಳಪೆ ಆಹಾರ ಪೂರೈಸುವುದನ್ನು ನಿಲ್ಲಿಸಿ, ಗುಣಮಟ್ಟದ ಅಹಾರ ನೀಡಿ’ ಎಂದು ಸಿಬ್ಬಂದಿಗೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.