ADVERTISEMENT

ಕಲಬುರ್ಗಿಯನ್ನು ಬೆಂಗಳೂರು ಮಾಡ್ತಿವಿ

ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:17 IST
Last Updated 8 ಮೇ 2018, 13:17 IST
ಕಲಬುರ್ಗಿಯ ನ್ಯೂ ರಾಘವೇಂದ್ರ ಕಾಲೊನಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಪ್ರಚಾರ ನಡೆಸಿದರು. ಅಭ್ಯರ್ಥಿ ಚಂದ್ರಕಾಂತ ಪಾಟೀಲ ಇದ್ದರು
ಕಲಬುರ್ಗಿಯ ನ್ಯೂ ರಾಘವೇಂದ್ರ ಕಾಲೊನಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಪ್ರಚಾರ ನಡೆಸಿದರು. ಅಭ್ಯರ್ಥಿ ಚಂದ್ರಕಾಂತ ಪಾಟೀಲ ಇದ್ದರು   

ಕಲಬುರ್ಗಿ: ‘ಕಲಬುರ್ಗಿ ಉತ್ತರ ಮತ್ತು ದಕ್ಷಿಣ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ. ಬೆಂಗಳೂರಿನಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಕಲಬುರ್ಗಿಗೆ ಕಲ್ಪಿಸುತ್ತೇವೆ’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಭರವಸೆ ನೀಡಿದರು.

ಕಲಬುರ್ಗಿ ಉತ್ತರ ಕ್ಷೇತ್ರದ ಅಭ್ಯರ್ಥಿ ಚಂದ್ರಕಾಂತ ಪಾಟೀಲ ಅವರ ಪರವಾಗಿ ಇಲ್ಲಿಯ ನ್ಯೂ ರಾಘವೇಂದ್ರ ಕಾಲೊನಿ ಹಾಗೂ ಉತ್ತರ ಕ್ಷೇತ್ರದ ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಪರವಾಗಿ ಹಳೆಯ ಜೇವರ್ಗಿ ರಸ್ತೆಯ ಪಿ ಅಂಡ್‌ ಟಿ ಕಾಲೊನಿ ಬಳಿ ಸೋಮವಾರ ಬಹಿರಂಗ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

‘ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಹೀಗೆ ಡಬಲ್‌ ಎಂಜಿನ್‌ ಸರ್ಕಾರಗಳು ಕೆಲಸ ಮಾಡಲಿವೆ. ಚಂದು–ಅಪ್ಪು ಡಬಲ್‌ ಎಂಜಿನ್‌ಗಳಿಗೆ ಆಶೀರ್ವದಿಸಿ ನಗರದ ಅಭಿವೃದ್ಧಿಗೆ ಸಹಕರಿಸಿ’ ಎಂದರು.

ADVERTISEMENT

‘ಹಿಂದೆ ಕಲಬುರ್ಗಿ ಉತ್ತರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಶಾಸಕರು ಒಂದು ಕಣ್ಣಿಗೆ ಬೆಣ್ಣೆ–ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸಿದ್ದರು. ಅಭಿವೃದ್ಧಿಯ ಬಗ್ಗೆ ಅವರು ಚಿಂತಿಸಲೇ ಇಲ್ಲ’ ಎಂದು ಆರೋಪಿಸಿದರು.

‘ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ್ದ ಯಡಿಯೂರಪ್ಪ ಅವರದ್ದು ಝೀರೊ ಬಡ್ಡಿ ಆದರೆ, ರೈತರ ನೆರವಿಗೆ ಬಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಮೀಟರ್‌ ಬಡ್ಡಿ ಸರ್ಕಾರ’ ಎಂದು ಲೇವಡಿ ಮಾಡಿದರು.

‘ಸಿದ್ದ ಸರ್ಕಾರ ಎಂದು ಕಾಂಗ್ರೆಸ್ಸಿಗರು ಜಾಹೀರಾತು ನೀಡುತ್ತಿದ್ದಾರೆ. ಅದು ಸಿದ್ದ ಸರ್ಕಾರ; ಬಿದ್ದ ಕರ್ನಾಟಕ ಎಂದಾಗಬೇಕು. ಏಕೆಂದರೆ ಅವರು ಕರ್ನಾಟಕವನ್ನು ಮಲಗಿಸಿದ್ದಾರೆ. ಅದನ್ನು ಮೈಕೊಡವಿ ಎಬ್ಬಿಸಬೇಕಿದೆ. ಅಭಿವೃದ್ಧಿಯಲ್ಲಿ ರಾಜ್ಯವನ್ನು ನಂಬರ್‌ 1 ಮಾಡಬೇಕಿದೆ. ಮೋದಿ ಬಿರುಗಾಳಿ ಬೀಸುತ್ತಿದ್ದು, ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ’ ಎಂದರು.

‘ಅನಂತಕುಮಾರ್‌ ಅವರು ಕಲಬುರ್ಗಿಗೆ ರಸಗೊಬ್ಬರ ಕಾರ್ಖಾನೆ ಮಂಜೂರು ಮಾಡಬೇಕು’ ಎಂದು ಚಂದ್ರಕಾಂತ ಪಾಟೀಲ ಮನವಿ ಮಾಡಿದರು.

‘ಕ್ಷೇತ್ರದಲ್ಲಿ ಶೌಚಾಲಯ, ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ನಾನು ಗೆದ್ದರೆ ಎರಡು ವರ್ಷಗಳಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ನಮ್ಮ ಜಿಲ್ಲೆಯವರು ಕೇಂದ್ರ ಸಚಿವರಾಗಿದ್ದರೂ ಕಲಬುರ್ಗಿ ನಗರದ ಅಭಿವೃದ್ಧಿಗೆ ಬಿಡಿಗಾಸು ನೀಡಲಿಲ್ಲ. ಅನಂತಕುಮಾರ್‌ ಅವರು ಕಲಬುರ್ಗಿ ನಗರದ ಒಳಚರಂಡಿಗೆ ಅಮೃತ್‌ ಯೋಜನೆಯಡಿ ₹150 ಕೋಟಿ ಅನುದಾನ ಕೊಡಿಸಿದ್ದಾರೆ’ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ಕೆ.ಬಿ.ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ರಘುನಾಥ ಮಲ್ಕಾಪುರೆ, ಪ್ರಮುಖರಾದ ಶಶೀಲ್‌ ನಮೋಶಿ, ವಿದ್ಯಾಸಾಗರ ಕುಲಕರ್ಣಿ ಇದ್ದರು.

**
ಕಾಂಗ್ರೆಸ್ಸಿಗರ ಸಭೆಗಳಿಗೆ ಜನ ಬರುತ್ತಿಲ್ಲ. ಅದಕ್ಕಾಗಿ ಬೆಳ್ಳಿಗ್ಗೆ ಮುಖ್ಯಮಂತ್ರಿ, ಮಧ್ಯಾಹ್ನ ರಾಹುಲ್‌, ಸಂಜೆ ರಮ್ಯ ಅವರು ಟ್ವೀಟ್‌ ಮಾಡುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ
– ಅನಂತಕುಮಾರ್‌, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.