ಕಲಬುರ್ಗಿ: ವಿಧಾನಸಭಾ ಚುನಾವಣೆ ಮತ ಎಣಿಕೆಗೆ ಒಟ್ಟು 485 ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಸಿಬ್ಬಂದಿಯ ಎರಡನೇ ಹಂತದ ರ್ಯಾಂಡಮೈಸೇಷನ್ ಪ್ರಕ್ರಿಯೆಯನ್ನು ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಆರ್, ವೆಂಕಟೇಶಕುಮಾರ್ ಭಾನುವಾರ ಕೈಗೊಂಡರು.
ಜಿಲ್ಲೆಯ 9 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆಯು ಮೇ 15ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಜರುಗಲಿದೆ. ಪ್ರತಿ ಮತಕ್ಷೇತ್ರಕ್ಕೆ ಮತ ಎಣಿಕೆ ಕೇಂದ್ರದಲ್ಲಿ 14 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗಾಗಿ ಪ್ರತಿ ಮತಕ್ಷೇತ್ರಕ್ಕೆ ತಲಾ 17 ಮತ ಎಣಿಕೆ ಮೇಲ್ವಿಚಾರಕರು ಮತ್ತು ಸಹಾಯಕರನ್ನು ನಿಯೋಜಿಸಲಾಗಿದೆ. ಒಟ್ಟು 153 ಮೇಲ್ವಿಚಾರಕರು ಮತ್ತು 153 ಸಹಾಯಕರು ಕಾರ್ಯನಿರ್ವಹಿಸುವರು.
ಆಳಂದ ಹೊರತುಪಡಿಸಿ ಪ್ರತಿ ಮತಕ್ಷೇತ್ರಕ್ಕೆ ತಲಾ 20 ಮೈಕ್ರೊಆಬ್ಸರ್ವರ್ ಮತ್ತು ಆಳಂದ ಮತಕ್ಷೇತ್ರಕ್ಕೆ 19 ಮೈಕ್ರೊ ಆಬ್ಸರ್ವರ್ಗಳಂತೆ ಒಟ್ಟು 179 ಮೈಕ್ರೋ ಅಬ್ಸರ್ವರ್ಗಳನ್ನು ನಿಯೋಜಿಸಲಾಗಿದೆ.
‘ಮತ ಎಣಿಕೆಗೆ ನೇಮಿಸಲಾದ ಅಧಿಕಾರಿ ಮತ್ತು ಸಿಬ್ಬಂದಿಗೆ ಈಗಾಗಲೇ ಎರಡು ಬಾರಿ ತರಬೇತಿ ನೀಡಲಾಗಿದೆ. ಅಂತಿಮವಾಗಿ ಸೋಮವಾರ (ಮೇ 14) ಮಧ್ಯಾಹ್ನ 3ಕ್ಕೆ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ತರಬೇತಿ ನಡೆಯಲಿದೆ. ಈ ತರಬೇತಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು. ಚುನಾವಣಾ ವೀಕ್ಷಕರಿಗೆ ನೇಮಿಸಲಾಗಿರುವ ಲೈಸನ್ ಅಧಿಕಾರಿಗಳು ಜಿಲ್ಲಾಧಿಕಾರಿ ಚುನಾವಣಾ ಶಾಖೆಯಿಂದ ಮತ ಎಣಿಕೆ ಪ್ರಕ್ರಿಯೆ ಮಾರ್ಗಸೂಚಿ ಪಡೆದು ಚುನಾವಣಾ ವೀಕ್ಷಕರಿಗೆ ನೀಡಬೇಕು. ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳ ಅಂತಿಮ ರ್ಯಾಂಡಮೈಸೇಷನ್ಇನ್ನೊಂದು ಹಂತದಲ್ಲಿ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು.
ಚುನಾವಣೆ ಸಾಮಾನ್ಯ ವೀಕ್ಷಕರಾದ ಮೋಹಿಂದರ್ ಪಾಲ್ ಅರೋರಾ, ರಶೀದ್ ಖಾನ್, ಸಂಜೀವ ಕುಮಾರ ಬೇಸರಾ, ಪಿ.ವೇಣುಗೋಪಾಲ, ಬ್ರಿಜ್ ಮೋಹನಕುಮಾರ, ಡಾ. ಆರ್. ರಾಜೇಶ ಕುಮಾರ, ಮತ ಎಣಿಕೆ ವೀಕ್ಷಕ ಸಿ ಮುನಿನಾಥನ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ, ಎನ್ಐಸಿ ಅಧಿಕಾರಿ ಅವಧಾನಿ ಮತ್ತು ಎಲ್ಲ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು ಪಾಲ್ಗೊಂಡಿದ್ದರು.
**
ಮತ ಎಣಿಕೆ ಸುಗಮವಾಗಿ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ. ಯಾವುದೇ ಗೊಂದಲ ಮತ್ತು ಆತಂಕವಿಲ್ಲದೇ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸವಿದೆ
– ಆರ್.ವೆಂಕೇಶಕುಮಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.