ADVERTISEMENT

ಹಣಮಂತ ಕೂಡಲಗಿ ಕೊಲೆ: 10 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:27 IST
Last Updated 18 ಜೂನ್ 2021, 5:27 IST

ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಕಲ್ಲೂರು–ಕೆ ಬಳಿ ಈಚೆಗೆ ನಡೆದ ಹಣಮಂತ ಕೂಡಲಗಿ (46) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಯೂರ ಗ್ರಾಮದ ಸಹೋದರರಾದ ಗೋಪಾಲ ಕಟ್ಟಿಮನಿ, ಮಹಾಂತಪ್ಪ ಕಟ್ಟಿಮನಿ, ವಿಜಯಪುರ ಜಿಲ್ಲೆ ಆಲಮೇಲದ ಸುನೀಲ, ಅನಿಲ ಬಾಜಿರಾಯ ಬಾವಿಕಟ್ಟಿ, ಉಮೇಶ ಭಾವಿಕಟ್ಟಿ, ರಾಜು ಕಾಂಬಳೆ, ಸುನೀಲ ರೇವಣಿಸಿದ್ದಪ್ಪ, ಶಿವಶರಣಪ್ಪ, ಶ್ರೀಮಂತ, ದೇವೇಂದ್ರ ಸಿದ್ರಾಮಪ್ಪ ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿತರು ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದ ತೋಟದಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಆಧರಿಸಿ, ವಿಶೇಷ ತಂಡ ರಚಿಸಿದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ಮಯೂರ ಗ್ರಾಮದ ಭಾವಿಕಟ್ಟಿ ಕುಟುಂಬ ಹಾಗೂ ಕೂಡಲಗಿ ಗ್ರಾಮದ ಹೊಸಮನಿ ಕುಟುಂಬದವರ ನಡುವಿನ ಹಳೆಯ ವೈಷಮ್ಯದ ಕಾರಣ ಈ ಕೊಲೆ ನಡೆದಿದೆ. ಎರಡು ವರ್ಷಗಳ ಹಿಂದೆ ಕಲಬುರ್ಗಿ ಹೊರವಲಯದಲ್ಲಿ ಶಿವಲಿಂಗಪ್ಪ ಎನ್ನುವವರ ಕೊಲೆ ನಡೆದಿತ್ತು. ಅದರ ಪ್ರತಿಕಾರವಾಗಿ ಈ ಕೊಲೆ ನಡೆದಿರುವುದು ಮೇಲ್ಮೋಟಕ್ಕೆ ಕಂಡುಬಂದಿದೆ’ ಎಂದೂ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅವರ ಸಹೋದರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇರಿದಂತೆ 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಎಲ್ಲ ಹೆಸರುಗಳನ್ನು ಶರಣಬಸಪ್ಪ
ಕೂಡಲಗಿ ನೀಡಿರುವ ದೂರಿನಂತೆ ನೆಲೋಗಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.