ADVERTISEMENT

12 ಗಂಟೆ ವಿದ್ಯುತ್ ವ್ಯತ್ಯಯ: ಪರದಾಡಿದ ಜನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 5:03 IST
Last Updated 21 ಜುಲೈ 2023, 5:03 IST

ವಾಡಿ: ಗುರುವಾರ ಬಿಟ್ಟುಬಿಡದೇ ಮಳೆ ಸುರಿದಿದ್ದರಿಂದ ಜನಸಾಮಾನ್ಯರು ತೀವ್ರ ಪರದಾಡಿದರು. ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗದೇ ಜನರು ಮನೆಯಲ್ಲಿಯೇ ಉಳಿದರು. ಆದರೆ ಇದರ ಮಧ್ಯೆ ವಿದ್ಯುತ್ ಕೈಕೊಟ್ಟಿದ್ದರಿಂದ ಜನರು ಅತ್ತ ಮನೆಯಲ್ಲಿಯೂ ಇರದೇ ಇತ್ತ ಹೊರಗೆ ಬಾರದೇ ತೀವ್ರ ತತ್ತರಿಸಿದರು. ಗುರುವಾರ ಇಡೀ ದಿನ ತಾಂತ್ರಿಕ ಕಾರಣ ನೆಪವೊಡ್ಡಿ ಜೆಸ್ಕಾಂ ಇಲಾಖೆ ವಿದ್ಯುತ್ ಸರಬರಾಜು ನಿಲ್ಲಿಸಿದ್ದ ಕಾರಣ ಜನರು ಇಲಾಖೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಳ್ಳೊಳ್ಳಿ ಉಪಕೇಂದ್ರ ವ್ಯಾಪ್ತಿಯ ಸುಮಾರು 20 ಹಳ್ಳಿಗಳು ಹಾಗೂ ತಾಂಡಾಗಳಲ್ಲಿ ವಿದ್ಯುತ್ ಪೂರೈಕೆಯಿಲ್ಲದೇ ಜನರು ತೀವ್ರ ಸಂಕಷ್ಟ ಅನುಭವಿಸಿದರು. ಇಲ್ಲಿನ ಜೆಸ್ಕಾಂ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾದ ನಿರ್ವಹಣೆ ಮಾಡದ ಕಾರಣ ಹಲವು ಗ್ರಾಮಗಳ ಜನರು ವಿದ್ಯುತ್ ಇಲ್ಲದೇ ಪರದಾಡಬೇಕಾಯಿತು. ಹಲವೆಡೆ ಬೆಳಿಗ್ಗೆ 10ಗಂಟೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡು ರಾತ್ರಿ 10 ಗಂಟೆಗೆ ಪೂರೈಕೆ ಶುರುವಾಯಿತು. ಮಳೆಗಾಲ ಆರಂಭವಾಗಿದ್ದು ಇದಕ್ಕೆ ತಕ್ಕಂತೆ ಜೆಸ್ಕಾಂ ಇಲಾಖೆ ಸಿದ್ಧತೆ ಮಾಡಿಕೊಳ್ಳದೇ ಬೇಜವಾಬ್ದಾರಿ ತೋರಿದೆ ಎಂದು ಜನ ಬೇಸರ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT