ಅಫಜಲಪುರ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿವರ್ಷ 15 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು, ತೋಟಗಾರಿಕೆ ಮತ್ತು ಪಶುಸಂಗೋಪನೆ ವಲಯಕ್ಕೆ ನಿರಂತರ ವಿದ್ಯುತ್
ಪೂರೈಕೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ವೈ.ಪಾಟೀಲ ತಿಳಿಸಿದರು.
ತಾಲ್ಲೂಕಿನ ಅವರಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು. ಮಾಲೀಕಯ್ಯ ಗುತ್ತೇದಾರ ಅವರು 6 ಬಾರಿ ಶಾಸಕರಾದರು ಗ್ರಾಮಗಳ ಅಭಿವೃದ್ಧಿಯಾಗಿಲ್ಲ. ₹ 700 ಕೋಟಿ ಖರ್ಚು ಮಾಡಿ ಭೀಮಾ ಏತ ನೀರಾವರಿ ನಿರ್ಮಾಣ ಮಾಡಿದರೂ ರೈತರ ಜಮೀನಿಗೆ ನೀರು ತಲುಪಿಲ್ಲ ಎಂದು ದೂರಿದರು.
ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ದಿನಕ್ಕೆ 20 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೊರೈಕೆ ಮಾಡಲಾಗುತ್ತದೆ. ಅಫಜಲಪುರ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಮಹಿಳಾ ಶೌಚಾಲಯ, ಸಿಮೆಂಟ್ ರಸ್ತೆ, ಕುಡಿಯುವ ನೀರಿಗಾಗಿ ಬಹುಗ್ರಾಮ ಯೋಜನೆ ಹಾಗೂ ಆರೋಗ್ಯ, ಶಿಕ್ಷಣ, ಕೃಷಿ ಇವುಗಳಿಗೆ ಆದ್ಯತೆ ನೀಡಲಾಗುವುದು. ಭೀಮಾ ಯೋಜನೆಯ ಪೂರ್ಣ ಪ್ರಮಾಣದ ಲಾಭ ಕಲ್ಪಿಸಿಕೊಡುವದು. 30 ಸಾವಿರ ಎಕರೆ ನೀರಾವರಿ ಸೌಲಭ್ಯ ಕಲ್ಪಿಸುವ ಬಂದರವಾಡ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುವದು ಎಂದು ಅವರು ತಿಳಿಸಿದರು.
ಪ್ರಚಾರ ಸಭೆ: ಕಾಂಗ್ರೆಸ್ ಅಭ್ಯರ್ಥಿ ಎಂ.ವೈ.ಪಾಟೀಲ ಅವರ ಬೆಂಬಲಿಗರೊಂದಿಗೆ ತಾಲ್ಲೂಕಿನ ಅವರಳ್ಳಿ, ಗೊಬ್ಬುರವಾಡಿ, ವಡ್ಡಳ್ಳಿ, ಹಾವನೂರ, ಬಿದನೂರ, ಅವರಳ್ಳಿ, ಗೊಬ್ಬುರ(ಕೆ) ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿದರು. ಮುಖಂಡರಾದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ, ಕಾರ್ಯದರ್ಶಿ ಶರಣು ಕುಂಬಾರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಸಿದ್ದಾರ್ಥ ಬಸರಿಗಿಡದ, ಪ್ರಕಾಶ ಜಮಾದಾರ, ರಾಜು ಅವರಳ್ಳಿ, ಅರುಣಕುಮಾರ ಪಾಟೀಲ ಗೊಬ್ಬುರ, ಶಿವಶಂಕರ ಪಾಸೋಡಿ, ಸುರೇಶ ಅವಟೆ, ವಿಶ್ವನಾಥ ಕಾರನಾಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.