ಕಲಬುರಗಿ: ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆ ಉತ್ತೀರ್ಣಗೊಳ್ಳಲು ಆಗುತ್ತಿಲ್ಲ ಎಂದು ಮನನೊಂದ ಯುವಕನೊಬ್ಬ, ಸಮೀಪದ ನಾಗನಹಳ್ಳಿಯಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ವಸತಿಗೃಹದಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದ ಮಂಜುನಾಥ ಮಾರುತಿ (23) ಮೃತರು. ಪೊಲೀಸ್ ಸ್ಪರ್ಧಾತ್ಮಕ ಮತ್ತು ಇನ್ನಿತರ ಪರೀಕ್ಷೆಗಳ ತರಬೇತಿಗೆ ಮತ್ತು ಚೆನ್ನಾಗಿ ಓದಿಕೊಳ್ಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಪಾಲಕರು ನಾಗನಹಳ್ಳಿಯ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಇರಿಸಿದ್ದರು. ಆದರೆ, ಓದಿದ್ದು ಸರಿಯಾಗಿ ನೆನಪುಳಿಯದ ಕಾರಣ ಯುವಕ ಖಿನ್ನತೆಗೆ ಒಳಗಾಗಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
ನೇಣು ಹಾಕಿಕೊಳ್ಳುವ ಮುನ್ನ ಪತ್ರ ಬರೆದಿಟ್ಟಿರುವ ಮಂಜುನಾಥ, ‘ನನ್ನಿಂದ ಓದಲು ಆಗುತ್ತಿಲ್ಲ. ಅಪ್ಪ–ಅಮ್ಮನಿಗೆ ನಾನು ಮೋಸ ಮಾಡುತ್ತಿದ್ದೇನೆ ಎಂಬ ಭಾವನೆ ಕಾಡುತ್ತಿದೆ. ಅಲ್ಲದೇ ನನ್ನ ಸಾವಿಗೆ ನಾನೇ ಕಾರಣ’ ಎಂದೂ ಅದರಲ್ಲಿ ಬರೆದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.