ಅಫಜಲಪುರ: ಸಿಡಿಲು ಬಡಿದು ಮೃತಪಟ್ಟ ತಾಲ್ಲೂಕಿನ ಕರಜಗಿ ಗ್ರಾಮದ ರೈತ ನಬಿಲಾಲ ಚೌಧರಿ ಅವರ ಮನೆಗೆ ಶಾಸಕ ಎಂ. ವೈ. ಪಾಟೀಲ್ ಗುರುವಾರ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಮಂಜೂರಾದ ₹ 5 ಲಕ್ಷ ಪರಿಹಾರವನ್ನು ನೀಡಿದರು.
ಕುಟುಂಬಕ್ಕೆ ಇನ್ನೂ ಯಾವ ಯಾವ ರೀತಿಯ ಸೌಲಭ್ಯಗಳನ್ನು ನೀಡಬಹುದೆಂದು ತಹಶೀಲ್ದಾರ್ ಸಂಜುಕುಮಾರ್ ದಾಸರ್ ಅವರೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಶಾಸಕರು, ‘ನಬಿಲಾಲ ಅವರ ಕುಟುಂಬಕ್ಕೆ ಒಂದು ತಿಂಗಳವರೆಗೆ ಪಡಿತರ ಆಹಾರಧಾನ್ಯ ಉಚಿತವಾಗಿ ನೀಡಬೇಕು. ಅವರು ವಾಸ ಮಾಡಲು ಈಗಿರುವ ಮನೆ ಸರಿಯಾಗಿಲ್ಲ. ಅವರಿಗೊಂದು ಸರ್ಕಾರದಿಂದ ಮನೆ ಮಂಜೂರು ಮಾಡಲಾಗುವುದು. ಮನೆಯಲ್ಲಿ ಯಾರಾದರೂ ನೌಕರಿ ಮಾಡಲು ಮುಂದೆ ಬಂದರೆ ಅವರಿಗೆ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ನೀಡಲಾಗುವುದು. ಪ್ರಕೃತಿ ವಿಕೋಪಗಳ ಕುರಿತು ಸಹ ಜನರು ಸಹ ಎಚ್ಚರಿಕೆಯಿಂದ ಇರಬೇಕು. ರೈತ ನಬಿಲಾಲ ಅವರದ್ದು ಬಡ ಕುಟುಂಬವಾಗಿದ್ದು ಮನೆಯ ಯಜಮಾನ ಮೃತಪಟ್ಟಿದ್ದರಿಂದ ಕುಟುಂಬಸ್ಥರಿಗೆ ಸಾಕಷ್ಟು ನೋವಾಗಿದೆ’ ಎಂದರು.
ಈ ವೇಳೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ, ಶಿವಾನಂದ ಗಾಡಿ ಸಾಹುಕಾರ, ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷ ಶ್ರೀಮಂತ ಬಿರಾದಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಇರ್ಫಾನ್ ಜಮಾದಾರ, ಶರಣು ಈಶ್ವರಗೊಂಡ, ಮಲ್ಲಿಕಾರ್ಜುನ ಕಿಣಗಿ, ಭೀಮಾಶಂಕರ್ ಬುಯ್ಯಾರ, ಕೈಲಾಸಯ್ಯ ಹಿರೇಮಠ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.