ಸೇಡಂ: ‘ದೇವನೂರು ಗ್ರಾಮಕ್ಕೆ ಹೊಂದಿಕೊಂಡಿರುವ ದೊಡ್ಡ ಹಳ್ಳಕ್ಕೆ ಅಡ್ಡಲಾಗಿ ₹5 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ನೀರಾವರಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು. ತಾಲ್ಲೂಕಿನ ದೇವನೂರು ಗ್ರಾಮ ದಲ್ಲಿ ಶುಕ್ರವಾರ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ತಾಲ್ಲೂಕಿನ ಕಾಗಿಣಾ ನದಿಯ ಮೇಲೆ ಅನೇಕ ಬ್ರಿಡ್ಜ್ ಕಂ ಬ್ಯಾರೇಜ್ ಗಳನ್ನು ನಿರ್ಮಿಸಲಾಗಿದೆ. ಇದರಿಂದ ಸಾಕಷ್ಟು ನೀರಿನ ಸಂಗ್ರಹ ಹೆಚ್ಚುತ್ತಿದ್ದು, ಭೂಮಿಯಲ್ಲಿ ಅಂತರ್ಜಲಮಟ್ಟ ಹೆಚ್ಚು ತ್ತಿದೆ. ಮುಂದಿನ ದಿನಗಳಲ್ಲಿ ನೀರು ನೀರಾವರಿ ಬಳಕೆಗೆ ಬರಲಿದೆ. ಅದೇ ರೀತಿಯಲ್ಲಿ ಕಮಲಾವತಿ ನದಿಗೂ ಸಹ ಬೇಡಿಕೆಯಿರುವ ಕಡೆ ಗಳಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸ ಲಾಗಿದೆ. ದೇವನೂರಿನಲ್ಲಿ ಬ್ರಿಡ್ಜ್ ನಿರ್ಮಿಸುವುದರಿಂದ ಅನೇಕ ರೀತಿ ಯಲ್ಲಿ ಅನುಕೂಲವಾಗಲಿದೆ’ ಎಂದರು.
‘ಬ್ರಿಡ್ಜ್ ನಿರ್ಮಿಸುವಾಗ ರೈತರ ಹೊಲಗಳು ಅದರ ವ್ಯಾಪ್ತಿಯಲ್ಲಿ ಬಂದರೆ, ಮಾಲೀಕತ್ವವನ್ನು ಹೊಂದಿ ರುವ ರೈತರಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ರೈತರು ಗೊಂದಲಕ್ಕೀಡಾಗದೆ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.
‘ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಈಗಾಗಲೇ ಮಾಡಲಾಗಿದ್ದು, ಪ್ರತಿ ಗ್ರಾಮ ಮತ್ತು ತಾಂಡಾಕ್ಕೆ ರಸ್ತೆ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ನಿರ್ಮಿಸಿ, ಹಾಳಾದ ರಸ್ತೆಗಳನ್ನು ದುರಸ್ತಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ಸಾಧ್ಯವಾಗುತ್ತಿದ್ದು, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹಣವನ್ನು ಬಳಸಲಾಗುತ್ತಿದೆ’
ಎಂದರು.
ದೇವನೂರು ಗ್ರಾಮದಲ್ಲಿರುವ ಶಾಲೆಯ ಕಟ್ಟಡ ದುರಸ್ತಿ, ಬಸ್ನಿಲ್ದಾಣ, ಸಿಸಿ ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕು ಎಂಬ ಬೇಡಿಕೆಯನ್ನು ಗ್ರಾಮದ ಜನರು ಸಚಿವರಿಗೆ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಸತಿಶರೆಡ್ಡಿ ಪಾಟೀಲ ರಂಜೋಳ, ಸಿದ್ದನಗೌಡ ಪಾಟೀಲ ಕೋಲ್ಕುಂದಾ, ವೆಂಕಟರೆಡ್ಡಿ ಪಾಟೀಲ, ಶಂಭುರೆಡ್ಡಿ ಮದ್ನಿ, ವೇಣಗೋಪಾಲ ಮಾತನಾಡಿದರು. ದುಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ ನಾಗಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶಾರದಮ್ಮ ಜೈಪಾಲರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಇಂದ್ರಾದೇವಿ ಬಸವರಾಜಗೌಡ ಪಾಟೀಲ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿಯ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣ ಭಗವಂತಿ ಭಾಗವಹಿಸಿದ್ದರು. ಎಚ್.ಮಲ್ಲಪ್ಪ, ಗುರುನಾಥರೆಡ್ಡಿ, ಶರಣಯ್ಯ ಕಲಾಲ್, ಶರಣಗೌಡ ನಾಚವಾರ, ರಾಜಶೇಖರರೆಡ್ಡಿ, ನಾರಾಯಣ ಜಾಕನಪಲ್ಲಿ, ಶಂಕರ ಭೂಪಾಲ ಇದ್ದರು.
* *
ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಿಸುವ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿನ ಹೊಲಗಳು ಸರ್ವೆಯಲ್ಲಿ ಬಂದರೆ ಭೂಮಿಯ ಮಾಲೀಕತ್ವವನ್ನು ಹೊಂದಿರುವ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ.
ಡಾ.ಶರಣಪ್ರಕಾಶ ಪಾಟೀಲ,
ವೈದ್ಯಕೀಯ ಶಿಕ್ಷಣ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.