ಕಲಬುರ್ಗಿ: ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ವತಿಯಿಂದ ಕೋವಿಡ್ ಸೋಂಕಿತರಿಗಾಗಿ ಕೊಡಮಾಡಿದ 650 ಹಾಸಿಗೆಗಳನ್ನು ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳಿಗೆ ರವಾನಿಸಲಾಗಿದೆ.
ಕೋವಿಡ್–19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಕಲಬುರ್ಗಿಯ ಜಿಮ್ಸ್, ಇಎಸ್ಐಸಿ ಆಸ್ಪತ್ರೆಗಳು ಹಾಗೂ ರಾಯಚೂರಿನ ರಿಮ್ಸ್ ಹಾಗೂ ಒಪೆಕ್ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಸಮುದಾಯ ಭವನ, ಮದುವೆ ಛತ್ರ ಹಾಗೂ ಕ್ರೀಡಾಂಗಣಗಳನ್ನೂ ಐಸೋಲೇಶನ್ ವಾರ್ಡ್ಗಾಗಿ ಪರಿವರ್ತಿಸಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುವಂತೆ ಹಾಸಿಗೆಗಳನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಹಾಸಿಗೆಗಳನ್ನು ರವಾನಿಸುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹಸಿರು ನಿಶಾನೆ ತೋರಿಸಿದರು.
ಒಟ್ಟು 650 ಪೈಕಿ 550 ಹಾಸಿಗೆಗಳು ಕಲಬುರ್ಗಿಗೆ ಮತ್ತು 100 ಹಾಸಿಗೆಗಳು ರಾಯಚೂರಿಗೆ ಇನ್ನೆರಡು ದಿನಗಳಲ್ಲಿ ತಲುಪಲಿವೆ ಎಂದು ತಿಳಿಸಲಾಗಿದೆ.
ಪರಿಸರ ಸ್ನೇಹಿಯಾದ ಸುರಕ್ಷಿತ ಬೆಡ್ಗಳು ಇವಾಗಿವೆ. ನೀರಿನಿಂದ ರಕ್ಷಿಸಲ್ಪಡುವ ಗುಣಮಟ್ಟದ ತಳ, ಬೋರ್ಡ್ಗಳನ್ನು ಈ ಬೆಡ್ ಹೊಂದಿವೆ. ಯಾವುದೇ ಸ್ಥಳದಲ್ಲಾದರೂ ಸುಲಭವಾಗಿ ಹಾಕಬಹುದಾಗಿದ್ದು ಐಸೋಲೇಷನ್ ವಾರ್ಡ್ಗಳನ್ನಾಗಿ ಸ್ಟೇಡಿಯಂಗಳನ್ನು ಸಮುದಾಯ ಭವನಗಳನ್ನು ಪರಿವರ್ತಸಿ ಈ ಬೆಡ್ಗಳನ್ನು ಅಳವಡಿಸಬಹುದಾಗಿದೆ ಎಂದು ಡಿ.ಕೆ.ಶಿವಕುಮಾರ ಹಾಗೂ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪ್ರತಿ ಬೆಡ್ ಮೌಲ್ಯ ₹ 1,000
ಈಗ ಬೆಡ್ಗಳಿಗೆ ರಾಜ್ಯ ಸರ್ಕಾರ ಪ್ರತಿದಿನಕ್ಕೆ ₹800ರಂತೆ ಬಾಡಿಗೆ ನಿಗದಿ ಮಾಡಿ ಬಳಿಸಿಕೊಳ್ಳುತ್ತಿದೆ. ಆದರೆ, ಕೆಪಿಸಿಸಿ ವತಿಯಿಂದ ಕಳಿಸಲಾಗಿರುವ ಪ್ರತಿಯೊಂದು ಬೆಡ್ನ ದರ ₹ 1000. ಎಲ್ಲವನ್ನೂ ಸರ್ಕಾರಕ್ಕೆ ಉಚಿತವಾಗಿ ನೀಡಲಾಗಿದೆ. ಕನಿಷ್ಠ 400 ಕೆ.ಜಿ ಭಾರ ತಾಳಬಲ್ಲವು. ಜಿಲ್ಲಾಡಳಿತಗಳು ಈ ಹಾಸಿಗೆಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.