ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳೊಂದಿಗೆ ಇಸ್ರೊ ಅಧ್ಯಕ್ಷ ವಿ.ನಾರಾಯಣನ್, ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ 35 ವಿದ್ಯಾರ್ಥಿಗಳಿಗೆ ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಅವರು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.
ಇದರಲ್ಲಿ ವಿದ್ಯಾರ್ಥಿನಿಯರೇ ಸಂಖ್ಯೆಯೇ ಹೆಚ್ಚಾಗಿತ್ತು. ತಮ್ಮ ಮಕ್ಕಳು ಚಿನ್ನದ ಪದಕ ಪಡೆಯುವುದನ್ನು ಕಾಣಲು ಪೋಷಕರು ಹಾಗೂ ಸಂಬಂಧಿಗಳು ಕರ್ನಾಟಕ ಅಷ್ಟೇ ಅಲ್ಲದೇ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ಒಡಿಶಾ ಹಾಗೂ ಈಶಾನ್ಯ ರಾಜ್ಯಗಳಿಂದ ಬಂದಿದ್ದರು.
ಪದಕಗಳನ್ನು ಕೊರಳಿಗೇರಿಸಿಕೊಂಡ ವಿದ್ಯಾರ್ಥಿನಿಯರು ಇಸ್ರೊ ಅಧ್ಯಕ್ಷ ವಿ. ನಾರಾಯಣನ್, ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಸೇರಿದಂತೆ ವೇದಿಕೆಯಲ್ಲಿದ್ದವರ ಕಾಲಿಗೆರಗಿ ನಮಸ್ಕರಿಸಿದರು. ತಮ್ಮ ಮಕ್ಕಳು ಪದಕ ಹಾಗೂ ಪ್ರಮಾಣಪತ್ರ ಪಡೆಯುತ್ತಿದ್ದಂತೆಯೇ ಪೋಷಕರ ಕಣ್ಣಾಲಿಗಳು ತೇವಗೊಂಡವು. ಭಾರಿ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಬ್ರೊಲು ಗ್ರಾಮದ ವಿದ್ಯಾರ್ಥಿ ಬುರ್ರಾ ಮಸ್ತಾನ್ ವೇದಸಾಯಿ ಸಾಹಿತ್ಯ ನಿತಿನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ವಿಶ್ವವಿದ್ಯಾಲಯಕ್ಕೆ ಚಿನ್ನದ ಹುಡುಗನಾಗಿ ಮಿಂಚಿದರು. ಅವರಿಗೆ ವಿಭಾಗದಿಂದ ನೀಡುವ ಚಿನ್ನದ ಪದಕದ ಜೊತೆಗೆ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ. ಎ.ಎಂ. ಪಠಾಣ್ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಚಿನ್ನದ ಪದಕವನ್ನೂ ಇಸ್ರೊ ಅಧ್ಯಕ್ಷ ನಾರಾಯಣನ್ ಅವರು ಪ್ರದಾನ ಮಾಡಿದರು.
ಎಂಎಸ್ಸಿ ಲೈಫ್ ಸೈನ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಎಸ್.ಅರವಿಂದ್ ಪರವಾಗಿ ಅವರ ತಂದೆ, ತಾಯಿ ಪದಕ ಸ್ವೀಕರಿಸಿದರು. ಸಾರ್ವಜನಿಕ ಆಡಳಿತ ವಿಷಯದಲ್ಲಿ ಚಿನ್ನದ ಪದಕ ಪಡೆಯುವುದನ್ನು ಕಾಣಲು ತಮಿಳುನಾಡಿನ ಕೃಷ್ಣಗಿರಿ ಮೂಲದ ಅನುಶ್ರೀ ಎ. ಅವರ ತಂದೆ–ತಾಯಿಯೂ ಬಂದಿದ್ದರು.
ಮಂಗಳಯಾನದ ಪ್ರತಿ ಕಿ.ಮೀ. ವೆಚ್ಚವು ಆಟೊ ದರಕ್ಕಿಂತ ಕಡಿಮೆಯಾಗಿದೆ ಎಂದು ಪ್ರಧಾನಿಯವರು ಬಣ್ಣಿಸಿದ್ದಾರೆ. ಈ ಯೋಜನೆಯನ್ನು ಮೊದಲ ಪ್ರಯತ್ನದಲ್ಲೇ ಸಾಧಿಸಿದ ಹೆಗ್ಗಳಿಕೆ ಭಾರತದ್ದು-ವಿ.ನಾರಾಯಣನ್, ಇಸ್ರೊ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.