ಕಲಬುರ್ಗಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಹಿಂಬದಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಮೇಲೆ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಎಸ್ಪಿ ವಿ.ಎಂ. ಜ್ಯೋತಿ ನೇತೃತ್ವದ ಅಧಿಕಾರಿಗಳ ತಂಡವು ಉಪನೋಂದಣಾಧಿಕಾರಿ ಎಂ.ಎ.ಆಸೀಫ್ ಅವರಿಗೆ ಸೇರಿದ ಕಾರಿನಲ್ಲಿದ್ದ ₹ 86 ಸಾವಿರ ಹಣವನ್ನು ಜಪ್ತಿ ಮಾಡಿದೆ.
‘ಸಾರ್ವಜನಿಕರು ತಮ್ಮ ಪ್ರತಿಯೊಂದು ಕೆಲಸಕ್ಕೂ ಲಂಚ ಕೊಡಬೇಕಾಗಿದೆ. ಏಜೆಂಟರ ಹಾವಳಿ ಹೆಚ್ಚಾಗಿದೆ’ ಎಂಬ ದೂರುಗಳು ಎಸಿಬಿ ಅಧಿಕಾರಿಗಳಿಗೆ ಸಲ್ಲಿಕೆಯಾಗಿದ್ದವು. ದೂರನ್ನು ಆಧರಿಸಿ ಎಸಿಬಿ ಅಧಿಕಾರಿಗಳ ತಂಡ ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿಯನ್ನು ಸಂಪೂರ್ಣ ತಪಾಸಣೆ ಮಾಡಿತು.
ದಾಳಿ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಎಸಿಬಿ ಎಸ್ಪಿ ವಿ.ಎಂ.ಜ್ಯೋತಿ, ‘ದಾಳಿ ವೇಳೆ ಸಮರ್ಪಕ ದಾಖಲೆ ಇಲ್ಲದ ₹ 86 ಸಾವಿರ ನಗದನ್ನು ವಶಪಡಿಸಿಕೊಂಡಿದ್ದೇವೆ. ನಮ್ಮ ಸ್ವಂತ ಹಣವಾಗಿದ್ದರೆ ಅದನ್ನು ಕಚೇರಿಯ ಡ್ರಾಯರ್ ಹಾಗೂ ಕಾರಿನಲ್ಲಿ ಇಡುವುದಿಲ್ಲ. ಈ ಹಣ ಕಾರಿನಲ್ಲಿ ಸಿಕ್ಕಿರುವುದರಿಂದ ಕಚೇರಿ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.