ADVERTISEMENT

ಕೋಮು ಪ್ರಚೋದಕರನ್ನು ಬಂಧಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 16:29 IST
Last Updated 14 ಆಗಸ್ಟ್ 2020, 16:29 IST
ಶೃಂಗೇರಿ ಶಂಕರಾಚಾರ್ಯರ ಪ್ರತಿಮೆ ಬಳಿ ಅನ್ಯಧರ್ಮದ ಧ್ವಜ ಹಾರಿಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಕಲಬುರ್ಗಿಯಲ್ಲಿ ಶುಕ್ರವಾರ ಆದಿ ಶಂಕರಚಾರ್ಯರ ಭಕ್ತರ ಸಮೂಹದಿಂದ ಪ್ರತಿಭಟನೆ ನಡೆಸಲಾಯಿತು
ಶೃಂಗೇರಿ ಶಂಕರಾಚಾರ್ಯರ ಪ್ರತಿಮೆ ಬಳಿ ಅನ್ಯಧರ್ಮದ ಧ್ವಜ ಹಾರಿಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಕಲಬುರ್ಗಿಯಲ್ಲಿ ಶುಕ್ರವಾರ ಆದಿ ಶಂಕರಚಾರ್ಯರ ಭಕ್ತರ ಸಮೂಹದಿಂದ ಪ್ರತಿಭಟನೆ ನಡೆಸಲಾಯಿತು   

ಕಲಬುರ್ಗಿ: ’ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಸ್ಥಳದಲ್ಲಿ ಇನ್ನೊಂದು ಧರ್ಮದ ಬಾವುಟ ಹಾಕಿ ಕೊಮು ಪ್ರಚೋದನೆ ಮಾಡಿದ್ದು ಅಕ್ಷಮ್ಯ. ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಯತ್ನಿಸಿರುವ ಇಂಥ ಕೃತ್ಯ ಖಂಡನೀಯ. ತಕ್ಷಣವೇ ಆರೋಪಿಗಳನ್ನು ಬಂಧಿಸಿ, ಸೂಕ್ತ ಕ್ರಮಕೈಗೊಳ್ಳಬೇಕು‘ ಎಂದು ಜಿಲ್ಲೆಯ ಆದಿ ಶಂಕರಾಚಾರ್ಯರ ಭಕ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಶಂಕರರ ಭಕ್ತರು, ’ಆದಿಗುರು ಶಂಕರಾಚಾರ್ಯರರ ನಾಲ್ಕು ಮಠಗಳಲ್ಲಿ ಅತಿ ವಿಶಿಷ್ಟ ಪರಂಪರೆಯನ್ನು ಶೃಂಗೇರಿ ಮಠ ಹೊಂದಿದೆ. ಧರ್ಮ ಸಹಿಷ್ಣುತೆ, ಎಲ್ಲ ಧರ್ಮೀಯರ ಆಕರ್ಷಣೆಯ ಭಾವೈಕ್ಯದ ಕೇಂದ್ರವಾಗಿದೆ. ಮಠದಲ್ಲಿ ಪಂಕ್ತಿ ಭೇದವಿಲ್ಲದೇ ಎಲ್ಲ ಧರ್ಮದವರು ಪ್ರಸಾದ ಸ್ವೀಕರಿಸುವುದು ಅನುಕರಣೀಯ. ಜಾತಿ, ಧರ್ಮ ಮೀರಿದ ಮಠ ಆದಿ ಶಂಕರಾಚಾರ್ಯರ ಮಠವಾಗಿದೆ‘ ಎಂದು ಭಕ್ತರು ಹೇಳಿದರು.

ಇಂತಹ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಸ್ಥಳದಲ್ಲಿ ಅನ್ಯ ಧರ್ಮದ ಬಾವುಟ ಹಾಕಿ, ಅವಮಾನ ಮಾಡಲಾಗಿದೆ. ಅನುಯಾಯಿಗಳಿಗೂ ಮನಸ್ಸಿಗೆ ನೋವಾಗಿದೆ. ಆದ್ದರಿಂದ ದುಷ್ಟಶಕ್ತಿಗಳನ್ನು ಶೀಘ್ರ ಬಂಧಿಸಿ, ಸೂಕ್ತ ಕ್ರಮ ಜರುಗಿಸಬೇಕು. ಶಾಂತಿಭಂಗ ಉಂಟಾಗದಂತೆ ಸರ್ಕಾರ ಜಾಗ್ರತೆ ವಹಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ADVERTISEMENT

ಮುಖಂಡರಾದ ರಾಘವೇಂದ್ರ ಕುಲಕರ್ಣಿ, ಪಿ.ಎಚ್.ಕುಲಕರ್ಣಿ, ನರಹರಿ ಪಾಟೀಲ, ಮುರಳೀಧರ ಪೂಜಾರಿ, ದಯಾಘನ ಧಾರವಾಡ, ಗುಂಡಾಚಾರ್ಯ ನರಿಬೋಳ, ಜಗದೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.