
ಅಫಜಲಪುರ: ಸಂಕ್ರಮಣ ನಿಮಿತ್ತ ಪಟ್ಟಣದ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಪಟ್ಟಣದ ಬಸ್ ಡಿಪೊ ಹಿಂಬದಿಯ ಕ್ರೀಡಾಂಗಣದಲ್ಲಿ ತರಬಂಡಿ (ಎತ್ತಿನ ಬಂಡಿ) ಸ್ಪರ್ಧೆ ಜರುಗಿತು.
ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ಧವು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಣ್ಣೂರು ಗ್ರಾಮದ ಉಸ್ಮಾನ್ ಸಾಬ್ ಶೇಷಗಿರಿ ಅವರ ಎತ್ತುಗಳು ಪಡೆಯುವ ಮೂಲಕ ₹25,000 ಬಹುಮಾನವನ್ನು ಮುಡಿಗೇರಿಸಿಕೊಂಡಿತು.
ದ್ವಿತೀಯ ಸ್ಥಾನವನ್ನು ಬಂದ್ರವಾಡ ಗ್ರಾಮದ ಭೂತಾಳಿ ಬಿಂಗೆ ಅವರು ಎತ್ತುಗಳು ₹11,000 ಬಹುಮಾನ, ತೃತೀಯ ಸ್ಥಾನವನ್ನು ಪಟ್ಟಣದ ರಾಹುಲ್ ನೂಲಾ ಅವರ ಎತ್ತುಗಳು (₹5 ಸಾವಿರ ಬಹುಮಾನ) ಪಡೆದುಕೊಂಡವು.
ವೇದಿಕೆ ಕಾರ್ಯಕ್ರಮದಲ್ಲಿ ಪಟ್ಟಣ ಗುರು ಮಳೇಂದ್ರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಮಾತನಾಡಿ, ‘ ಇಂತಹ ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದರಿಂದ ಎತ್ತುಗಳ ಸಂತತಿ ಉಳಿದುಕೊಳ್ಳುತ್ತದೆ. ಮುಂದಿನ ಪೀಳಿಗೆಗೆ ಇದು ಮಾದರಿಯಾಗುತ್ತದೆ. ಸರ್ಕಾರವು ಇಂತಹ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡಬೇಕು’ ಎಂದರು.
ಮುಖಂಡ ಸಂಗ್ರಾಮಗೌಡ ಪಾಟೀಲ ಮಾತನಾಡಿ, ‘ಇತ್ತೀಚೆಗೆ ಕೃಷಿ ವಲಯದಲ್ಲಿ ಜಾನುವಾರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಇಂಥ ಎತ್ತುಗಳ ಸ್ಪರ್ಧೆ ಏರ್ಪಡಿಸುವುದರಿಂದ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದು ಒಳ್ಳೆಯ ಕಾರ್ಯಕ್ರಮ’ ಎಂದರು.
ರೈತ ಮುಖಂಡರಾದ ಚಂದ್ರಶೇಖರ್ ಕರಜಿಗಿ, ಚಂದ್ರಾಮ ಒಳಗೊಂಡ, ರಾಜಶೇಖರ ಹಿರೇಮಠ, ವೀರೇಶ, ಚಿದಾನಂದ ಮಠ, ಬಸಯ್ಯ ನಂದಿಕೋಲ, ಮುರಗೇಂದ್ರ ಮಸಳಿ, ಮಲ್ಲು ಬೆಳಗುಂಡಿ, ವಿಶ್ವನಾಥ್ ಕರಜಿಗಿ, ಧನ್ಯ ಕುಮಾರ್ ಭಸ್ಮೆ , ಚಂದ್ರಶೇಖರ್ ಕೆಂಗನಾಳ, ಸಕಲೇಶ್ ಪಾಟೀಲ, ಸುರೇಶ್ ಅವಟೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.