ಮಾಡಿಯಾಳ ಗ್ರಾಮದಲ್ಲಿ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಕುಟುಂಬಸ್ಥರು ಪರದಾಡಿದರು.
ಆಳಂದ: ಧಾರಾಕಾರ ಮಳೆಗೆ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಒಪ್ಪತೇಶ್ವರ ಕೆರೆ ಒಡೆದು ಅಪಾರ ಪ್ರಮಾಣದ ನೀರು ಗ್ರಾಮಗಳಲ್ಲಿನ ಮನೆಗಳಿಗೆ ನುಗ್ಗಿ ಶುಕ್ರವಾರ ರಾತ್ರಿಯಿಡಿ ಗ್ರಾಮಸ್ಥರು ಪರದಾಡಿದರು.
ಕಳೆದ ವಾರದಿಂದ ಸುರಿಯುತ್ತಿರುವ ಸತತ ಮಳೆಗೆ ಗ್ರಾಮದ ಸಮೀಪದ ಒಪ್ಪತೇಶ್ವರ ಕೆರೆಯು ಸಂಪೂರ್ಣ ಭರ್ತಿಯಾಗಿ, ಏಕಾಏಕಿ ರಾತ್ರಿ ಬಿರುಕು ಮೂಡಿ ಒಡೆದಿದೆ. ಗ್ರಾಮದಲ್ಲಿ ನೀರು ನುಗ್ಗಿ ಮುಖ್ಯರಸ್ತೆಗಳು, ದೇವಸ್ಥಾನದ ಆವರಣ ಮತ್ತಿತರ ಕಟ್ಟೆಗಳು ಜಲಾವೃತ್ತಗೊಂಡಿದ್ದವು. ಗ್ರಾಮದ 50ಕ್ಕೂ ಹೆಚ್ಚು ಮನೆಗಳಿಗೆ
ನೀರು ನುಗ್ಗಿದೆ.
ಮನೆಗಳಿಗೆ ಏಕಾಏಕಿ ನೀರು ನುಗ್ಗಿದ್ದರಿಂದ ನಿದ್ರೆಯಲ್ಲಿದ್ದ ಜನರು ಗಾಬರಿಯಾಗಿ, ದೇವಸ್ಥಾನ, ಶಾಲೆಗಳಲ್ಲಿ ಆಶ್ರಯ ಪಡೆದರು. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸಾಮಗ್ರಿಗಳು, ಬಟ್ಟೆ, ತೊಗರಿ, ಜೋಳ, ಗೋಧಿ ಚೀಲಗಳು ತೇವಗೊಂಡು ಹಾಳಾಗಿವೆ. ಮನೆಯಿಂದ ನೀರನ್ನು ಹೊರ ತೆಗೆಯಲು ಕುಟುಂಬಸ್ಥರು ಹರಸಾಹಸ ಪಡಬೇಕಾಯಿತು. ಮಕ್ಕಳು, ವೃದ್ಧರಿಗೆ ತೊಂದರೆಯಾಯಿತು.
ತಹಶೀಲ್ದಾರ್ ಭೇಟಿ: ತಹಶೀಲ್ದಾರ್ ಅಣ್ಣಾರಾವ ಪಾಟೀಲ, ತಾ.ಪಂ ಇಒ ಮಾನಪ್ಪ ಕಟ್ಟಿಮನಿ ಅವರು ಮಾಡಿಯಾಳ ಗ್ರಾಮಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಟುಂಬಸ್ಥರು ಅಧಿಕಾರಿಗಳ ಮುಂದೆ ತಮ್ಮ ಕಷ್ಟ ಹೇಳಿಕೊಂಡರು.
‘1972ರಲ್ಲಿ ನಿರ್ಮಾಣವಾದ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆರೆ ಸೂಕ್ತ ನಿರ್ವಹಣೆ ಆಗಿರಲಿಲ್ಲ. ಹೀಗಾಗಿ ಕೆರೆ ಒಡೆದು, ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ. ಸಂತ್ರಸ್ತ ಕುಟುಂಬಗಳಿಗೆ ತುರ್ತು ಪರಿಹಾರ ನೀಡಬೇಕು. ದವಸಧಾನ್ಯ, ದಿನಸಿ ಸಾಮಗ್ರಿ ತಕ್ಷಣ ಪೂರೈಸಬೇಕು’ ಎಂದು ಹೋರಾಟಗಾರ ಭೀಮಾಶಂಕರ ಮಾಡಿಯಾಳ ಒತ್ತಾಯಿಸಿದ್ದಾರೆ.
ಗ್ರಾಮದ ಕೆರೆ ಒಡೆದು ಗ್ರಾಮದ ಸುತ್ತಲಿನ ರೈತರ ಬಾಳೆ, ತೊಗರಿ, ಕಬ್ಬು ಹಾಗೂ ತರಕಾರಿ ಬೆಳೆ ಮತ್ತು ತೋಟಗಾರಿಕೆ ಬೆಳೆಗಳೂ ಹಾನಿಯಾಗಿದೆ. ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ರೈತರು ಅಧಿಕಾರಿಗಳನ್ನು ಒತ್ತಾಯಿಸಿದರು.
ಭೂಸನೂರು ಗ್ರಾಮಸ್ಥರ ಸಂಕಟ
ಅಮರ್ಜಾ ಅಣೆಕಟ್ಟೆಯ ಕೆಳಭಾಗದ ಭೂಸನೂರು ಗ್ರಾಮದಲ್ಲಿನ 130ಕ್ಕೂ ಹೆಚ್ಚು ಮನೆಗಳಿಗೆ ಶುಕ್ರವಾರ ನೀರು ನುಗ್ಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಭೂಸನೂರು ಗ್ರಾಮದ ಹಳೆ ಬಡಾವಣೆಗಳಲ್ಲಿನ ಹನುಮಾನ ಮಂದಿರ, ಅಗಸಿ, ವೀರಭದ್ರೇಶ್ವರ ಮಂದಿರ, ಕೆಜಿಬಿ ಬ್ಯಾಂಕ್ ಸುತ್ತಲಿನ ಮನೆಗಳಿಗೆ ನೀರು ನುಗ್ಗಿದೆ.
ರಾತ್ರಿ 2 ಗಂಟೆ ಸಮಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನೂರಾರೂ ಕುಟುಂಬಗಳು ರಾತ್ರಿಯಿಡಿ ಸಂಕಷ್ಟಕ್ಕಿಡಾದವು. ಕುಟುಂಬಸ್ಥರು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸಾಮಾಗ್ರಿ, ಬಟ್ಟೆವಸ್ತ್ರ ಹಾಗೂ ಮೇವು ಮತ್ತಿತರ ಸಾಮಾಗ್ರಿ ಹೊರ ತೆಗೆಯಲು ಪರದಾಡಿದರು. ಮಕ್ಕಳು, ಮಹಿಳೆಯರು ರಾತ್ರಿಯಲ್ಲಿ ಮನೆ ಬಿಟ್ಟು ಸ್ಥಳಾಂತರಗೊಂಡು ದಿನ ಕಳೆದರು. ಹನುಮಾನ ಮಂದಿರದಲ್ಲಿ ಸುತ್ತಲಿನ ಕುಟುಂಬಸ್ಥರು ವಾಸ್ತವ್ಯ ಮಾಡಿದರು.
ಅಧಿಕಾರಿಗಳ ಭೇಟಿ: ತಹಶೀಲ್ದಾರ್ ಅಣ್ಣಾರಾವ ಪಾಟೀಲ, ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಗ್ರಾಮಕ್ಕೆ ಭೇಟಿ ನೀಡಿದರು.
ಸತತ ಮಳೆಯಿಂದ ಭೂಸನೂರು ಗ್ರಾಮದಲ್ಲಿನ ಮನೆಗಳಿಗೆ ಹಾಗೂ ಮಾಡಿಯಾಳದ ಗ್ರಾಮದ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದೆ, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ವಸ್ತುಗಳ ಸರಬುರಾಜು ಕೈಗೊಳ್ಳಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆಅಣ್ಣಾರಾವ ಪಾಟೀಲ, ತಹಶೀಲ್ದಾರ್
ಸೈಫಾನಸಾಬ ಜಮಾದಾರ ಗ್ರಾಮಸ್ಥ ಮಾಡಿಯಾಳರಾತ್ರಿ ಏಕಾಏಕಿ ಕೆರೆ ಒಡೆದು ಮನೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ಕುಟುಂಸ್ಥರು ಎಲ್ಲರೂ ಆತಂಕದಲ್ಲಿ ಕಳೆದೇವು, ಮನೆಯಲ್ಲಿ ಇದ್ದ ಧಾನ್ಯದ ಜತೆಗೆ ಇತರ ಸಾಮಗ್ರಿಗಳು ಸಂಪೂರ್ಣ ಹಾಳಾಗಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.