ಕಲಬುರ್ಗಿ: ಕೊರೊನಾ ಬಗ್ಗೆ ಅರಿವು ಮೂಡಿಸಲು ಪ್ರತಿ ನಿತ್ಯ ಸಾವಿರಾರು ಆಶಾ ಕಾರ್ಯಕರ್ತೆಯರು ಜಿಲ್ಲೆಯಾದ್ಯಂತ ಮನೆ ಮನೆಗೆ ತೆರಳಿ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸೂಕ್ತ ಸುರಕ್ಷಾ ಸಾಮಗ್ರಿಗಳು ಹಾಗೂ ವಿಶೇಷ ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ರಾಜ್ಯದಾದ್ಯಂತ ಹರಡಿರುವ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಅದರ ಸರ್ವೆ ನಡೆಸಲು ಹಾಗೂ ವಿದೇಶದಿಂದ ಬಂದಿರುವ ನಾಗರಿಕರನ್ನು ಮನೆ ಮನೆಯಲ್ಲಿ ಗುರುತಿಸಿ ಮಾಹಿತಿ ಸಂಗ್ರಹಿಸಲು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಆಶಾ ಕಾರ್ಯಕರ್ತೆಯರು ಇಂತಹ ಒಂದು ವಿಶೇಷ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ, ಈ ರೋಗಾಣು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ ಅವರಿಗೆ ಅಗತ್ಯವಾಗಿರುವ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಒದಗಿಸದೆ ಇವರ ಆರೋಗ್ಯ ರಕ್ಷಣೆಯನ್ನು ಕಡೆಗಣಿಸಲಾಗಿದೆ ಎಂದು ಜಿಲ್ಲಾ ಆಶಾ ಸಂಘಟನಾಕಾರರು ಜಿಲ್ಲಾ ಆರೋಗ್ಯ ಆಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ, ದಿನನಿತ್ಯ ಮಾಡುವ ಈ ಕಾರ್ಯಕ್ಕೆ ಇಲಾಖೆಯಿಂದ ಪ್ರೋತ್ಸಾಹ ಧನ ಇಲ್ಲದೇ ಸಾರಿಗೆ ವೆಚ್ಚ, ಮಾಸ್ಕ್, ಇನ್ನಿತರ ವೆಚ್ಚಗಳನ್ನು ಆಶಾ ಕಾರ್ಯಕರ್ತೆಯರೇ ಕೈಯಿಂದ ಖರ್ಚು ಮಾಡಿಕೋಳ್ಳುತ್ತಿದ್ದಾರೆ.
ಕೂಡಲೇ ಎಲ್ಲಾ ಕಾರ್ಯಕರ್ತೆಯರಿಗೆ ಅಗತ್ಯವಿರುವ ಎಲ್ಲಾ ಸುರಕ್ಷಾ ಸಾಮಗ್ರಿಗಳು, ವಿಶೇಷ ಪ್ರೋತ್ಸಾಹ ಧನವನ್ನು ನೀಡಬೇಕೆಂದು ಹಾಗೂ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿಶೇಷ ಗಮನ ಹರಿಸಬೇಕು ಎಂದು ಜಿಲ್ಲಾ ಸಂಘಟನಾಕಾರರಾದ ವಿ.ಜಿ.ದೇಸಾಯಿ, ಎಸ್.ಎಂ. ಶರ್ಮಾ, ಭಾಗಣ್ಣ ಬುಕ್ಕಾ, ರಾಧಾ, ಜಯಶ್ರೀ ಸರ್ಕಾರವನ್ನು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.