ಬಂಧನ
(ಪ್ರಾತಿನಿಧಿಕ ಚಿತ್ರ)
ಚಿಂಚೋಳಿ: ನಿಷ್ಕಾಳಜಿಯಿಂದ ಆಟೊ ಓಡಿಸಿದ್ದರಿಂದ ಹಂಪ್ನಲ್ಲಿ ಆಟೊ ಎತ್ತಿ ಬಡಿದಾಗ ಆಟೊದಲ್ಲಿದ್ದ 1 ವರ್ಷದ ಮಗು ಪ್ರಜ್ವಲ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೊ ಚಾಲಕ ಬಸವರಾಜ ಶಿವಪುತ್ರಪ್ಪ ಲೊಡ್ಡನೋರ್ಗೆ ಚಿಂಚೋಳಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ₹ 1 ಸಾವಿರ ದಂಡ ವಿಧಿಸಿದೆ.
ಚಿಂಚೋಳಿಯ ಕಾಟಾಪುರ ಆಸ್ಪತ್ರೆ ಬಳಿ 2020ರ ಸೆ.22ರಂದು ಘಟನೆ ನಡೆದಿದ್ದು, ಆಟೊ ಚಿಂಚೋಳಿಯಿಂದ ಹೂವಿನಭಾವಿಗೆ ಹೋಗುತ್ತಿತ್ತು. ಆಟೊದ ಚಕ್ರ ಮಗುವಿನ ಮೇಲಿನಿಂದ ಹೋಗಿತ್ತು. ಇದರಿಂದ ಅಪರಾಧಿಯ ನಿಷ್ಕಾಳಜಿ ಸಾಬೀತಾಗಿದ್ದರಿಂದ ಭಾರತೀಯ ದಂಡ ಸಂಹಿತೆ 279ರ ಅಡಿಯಲ್ಲಿ 3 ತಿಂಗಳ ಸಾದಾ ಶಿಕ್ಷೆ ವಿಧಿಸಿ ಪ್ರಭಾರ ನ್ಯಾಯಾಧೀಶ ಬಾಲು ಅವರು ಆದೇಶಿಸಿದ್ದಾರೆ.
ಜತೆಗೆ ಕಲಂ 337ರ ಅಡಿಯಲ್ಲಿ 3 ತಿಂಗಳು ಸಾದಾ ಜೈಲು ವಾಸ, ₹ 500 ದಂಡ, ತಪ್ಪಿದ್ದಲ್ಲಿ ಒಂದು ತಿಂಗಳು ಸಾದಾ ಶಿಕ್ಷೆ ಹಾಗೂ ಕಲಂ 304 (ಎ) ಅಡಿಯಲ್ಲಿ 2 ವರ್ಷ ಸಾದಾ ಕಾರವಾಸ ಮತ್ತು ₹ 2 ಸಾವಿರ ದಂಡ ತಪ್ಪಿದ್ದಲ್ಲಿ 1 ತಿಂಗಳು ಸಾದಾ ಶಿಕ್ಷೆ ಅನುಭವಿಸಲು ಬಾಧ್ಯಸ್ತನೆಂದು ಫೆ.11ರಂದು ನ್ಯಾಯಾಧೀಶರು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
ಸಹಾಯಕ ಸರ್ಕಾರಿ ಅಭಿಯೋಜಕ ಶಾಂತಕುಮಾರ ಜಿ.ಪಾಟೀಲ, ಅಂದಿನ ಚಿಂಚೋಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜಶೇಖರ ರಾಠೋಡ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ ಪ್ರಕರಣದ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ಜತೆಗೆ ಪೊಲೀಸ್ ಕಾನ್ಸ್ಟೆಬಲಗಳಾದ ಸುರೇಶ, ರಾಜಶೇಖರ ಸಾಕ್ಷಿಗಳನ್ನು ಹಾಜರುಪಡಿಸಿದ್ದಾರೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.