
ವಾಡಿ: ‘ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಅಪರಾಧ ತಡೆ ಮಾಸಾಚರಣೆಯನ್ನು ಆಚರಿಸಲಾಗುತ್ತದೆ. ಮನೆ ಕಳ್ಳತನ, ಸರ ಅಪಹರಣ, ಸೈಬರ್ ಅಪರಾಧಗಳು, ಮಾದಕ ವ್ಯಸನ, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಂತಹ ವಿವಿಧ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ’ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ರಾವೂರು ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಸೋಮವಾರ ವಾಡಿ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಮಾಸಾಚರಣೆ ಅಂಗವಾಗಿ ಪೊಲೀಸರು ರ್ಯಾಲಿಗಳು, ಬೀದಿ ನಾಟಕಗಳು, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಮತ್ತು ಸಮುದಾಯ ಸಂವಾದಗಳನ್ನು ಆಯೋಜಿಸುತ್ತಿದ್ದು, ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವುದೇ ಇದರ ಉದ್ದೇಶವಾಗಿದೆ’ ಎಂದರು.
‘ಸಾರ್ವಜನಿಕರು ಅಪರಾಧ ಮಾಹಿತಿಯನ್ನು ಹಂಚಿಕೊಳ್ಳಲು 112 (ತುರ್ತು ಸಹಾಯವಾಣಿ) ಅಥವಾ 1930 (ಸೈಬರ್ ಅಪರಾಧ ಸಹಾಯವಾಣಿ) ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಶಾಲಾ ಹಂತದಲ್ಲಿಯೇ ಮಕ್ಕಳು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ, ಗೊತ್ತಿರದೆ ಇರುವ ಲಿಂಕ್ಗಳನ್ನು ತೆರೆಯುವುದು, ಆನ್ಲೈನ್ ಗೇಮ್ಗಳಿಂದ ಮಕ್ಕಳನ್ನು ರಕ್ಷಿಸಬೇಕಾಗಿದೆ’ ಎಂದರು.
ಪಿಎಸ್ಐ ತಿರುಮಲೇಶ ಕುಂಬಾರ ಮಾತನಾಡಿ, ರಾವೂರು ಕ್ರಾಸ್ ಮತ್ತು ರಾವೂರು ನಡುವಿನ ರಸ್ತೆ ಮೇಲೆ ಅತಿಹೆಚ್ಚು ಬಂಡಿಗಳು ಓಡಾಡುತ್ತಿದ್ದು ಕತ್ತಲಾಗುತ್ತಿದ್ದಂತೆ ಅಪಘಾತವಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಹೆದ್ದಾರಿ ಮೇಲೆ ಓಡಾಡುವ ಪ್ರತಿ ಬಂಡಿಗಳಿಗೆ ಮತ್ತು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಕಡ್ಡಾಯವಾಗಿ ರೇಡಿಯಂ ಹಾಕಿಕೊಳ್ಳಬೇಕು ಎಂದು ಸೂಚಿಸಿದರು.
ವಾಡಿ ಅಪರಾಧ ವಿಭಾಗದ ಪಿಎಸ್ಐ ರೇಣುಕಾ ಉಡಗಿ ಮಾತನಾಡಿದರು. ಎತ್ತಿನ ಬಂಡಿಗಳಿಗೆ ರೇಡಿಯಂ ಸ್ಟಿಕ್ಕರ್ ಹಚ್ಚುವ ಮೂಲಕ ಎತ್ತಿನ ಬಂಡಿಗಳ ಅಪಘಾತ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಯಿತು.
ಪ್ರಮುಖರಾದ ಚೆನ್ನಣ್ಣ ಬಾಳಿ, ಶಿವಲಿಂಗಪ್ಪ ವಾಡೆದ್, ಅಣ್ಣಾರಾವ್ ಬಾಳಿ, ಈಶ್ವರಪ್ಪ ಬಾಳಿ, ಎಎಸ್ಐ ಗುಂಡಪ್ಪ ಕೊಗನೂರ್, ಗಣ್ಯರಾದ ಗುರುನಾಥ ಗುದಗಲ್, ಶರಣು ಜ್ಯೋತಿ, ಬಂದಗಿಸಾಬ್, ಗುರು ಗುತ್ತೇದಾರ್, ಪೇದೆಗಳಾದ ಲಕ್ಷ್ಮಣ ತಳಕೇರಿ, ರಸೂಲ್ ಖಾನ್, ಆರಿಫ್, ಜ್ಯೋತಿ, ಮಾಲನಬೀ ಇದ್ದರು. ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವoದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.