ADVERTISEMENT

ಅಮೃತ ಮಹೋತ್ಸವ: ಬಿಜೆಪಿಯಿಂದ ಟ್ರ್ಯಾಕ್ಟರ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:54 IST
Last Updated 15 ಆಗಸ್ಟ್ 2022, 4:54 IST
ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿ ಭಾನುವಾರ ಬಿಜೆಪಿ ದಕ್ಷಿಣ ಮಂಡಲದ ವತಿಯಿಂದ ಆಯೋಜಿಸಿದ್ದ ಟ್ರ್ಯಾಕ್ಟರ್ ರ್‍ಯಾಲಿ ನಡೆಯಿತು
ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿ ಭಾನುವಾರ ಬಿಜೆಪಿ ದಕ್ಷಿಣ ಮಂಡಲದ ವತಿಯಿಂದ ಆಯೋಜಿಸಿದ್ದ ಟ್ರ್ಯಾಕ್ಟರ್ ರ್‍ಯಾಲಿ ನಡೆಯಿತು   

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾನುವಾರ ನಗರದಾದ್ಯಂತ ವಿವಿಧ ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳು, ವಿದ್ಯಾ ಸಂಸ್ಥೆಗಳು ತಿರಂಗಾ ಯಾತ್ರೆ ನಡೆಸಿದವು.

ಬಿಜೆಪಿ ದಕ್ಷಿಣ ಮಂಡಲ ವತಿಯಿಂದ ಕೇಂದ್ರ ಬಸ್ ನಿಲ್ದಾಣದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್, ಜಗತ್ ವೃತ್ತ ಮಾರ್ಗವಾಗಿ ಶರಣಬಸವೇಶ್ವರ ದೇವಸ್ಥಾನದವರೆಗೆ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಯಿತು.

ಭಾರತಾಂಬೆಯ ಭಾವಚಿತ್ರ, ಹೂವು, ತ್ರಿವರ್ಣದ ಬಲೂನು ಮತ್ತು ರಾಷ್ಟ್ರ ಧ್ವಜಗಳಿಂದ ಸುಮಾರು 200 ಟ್ರ್ಯಾಕ್ಟರ್‌ಗಳು ಸಿಂಗಾರಗೊಂಡಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ರ್‍ಯಾಲಿಗೆ ಚಾಲನೆ ನೀಡಿದರು. ಕಾರ್ಯಕರ್ತರು ಕೇಸರಿ ಶಾಲು, ಮಹಿಳೆಯರು ಕೇಸರಿ ಪೇಟ ಧರಿಸಿ ತಿರಂಗಾ ಧ್ವಜ ಹಿಡಿದು ಘೋಷಣೆ ಕೂಗಿದರು.

ADVERTISEMENT

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಸಿದ್ದು ಪಾಟೀಲ, ಅರುಣ ಬಿನ್ನಡಿ ಇತರರು ಇದ್ದರು.

ರೋಟರಿ ಕ್ಲಬ್‌: ನಗರದ 5 ರೋಟರಿ ಕ್ಲಬ್‌ಗಳ ವತಿಯಿಂದ ಜಗತ್‌ನಿಂದ ಎಸ್‌ವಿಪಿ ವೃತ್ತದವರೆಗೆ ಜಾಥಾ ನಡೆಸಲಾಯಿತು.

ರೋಟರಿ ಕ್ಲಬ್‌ನ ಸದಸ್ಯರು,ಚೇತನ್ ಯೂಥ್ ಫಾರಂ ಶಾಲೆಯ ನೂರಾರು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು, ಘೋಷಣೆಗಳನ್ನು ಕೂಗಿದರು. ಮಾಣಿಕ ಪವಾರ, ಡಾ. ರಮೇಶ ಯಳಸಂಗಿಕರ್, ದೇವೇಂದ್ರ ಸಿಂಗ್ ಚವ್ಹಾಣ, ಕಾರ್ಯದರ್ಶಿ ಸುಹಾಸ್ ಕಣಗೆ, ಆನಂದ ದಂಡೋತಿ ಇದ್ದರು.

ಸಮಾಜ ಕಲ್ಯಾಣ ಇಲಾಖೆ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ್ ಪುಲಾರೆ ನೇತೃತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.

ಮುಖಂಡರಾದ ಮಲ್ಲಪ್ಪ ಹೊಸಮನಿ, ಸುನೀಲ ಮಾನಪಡೆ, ತಾಲ್ಲೂಕು ಕಚೇರಿ ಅಧೀಕ್ಷಕ ಸದಾನಂದ ಹಾಗರಗಿ, ಶ್ರೀನಿವಾಸ ಜಾಧವ, ಸಂಜಯಕುಮಾರ ಎಸ್.ವೈ, ವಿದ್ಯಾಧರ ಕಾಂಬ್ಳೆ ಸೇರಿದಂತೆ 31 ವಸತಿ ನಿಲಯದ ಮೇಲ್ವಿಚಾರಕರು ಇದ್ದರು.

ಪಿಡಿಎ ರ‍್ಯಾಲಿ: ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಿಂದ ಸಾಗಿದ ರ‍್ಯಾಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ ವೃತ್ತದವರೆಗೆ ಸಾಗಿ ಮತ್ತೆ ಕಾಲೇಜು ತಲುಪಿತು.

ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಸಿ. ಬಿಲಗುಂದಿ, ‘ಪಿಡಿಎ ಕಾಲೇಜು ಅತ್ಯುನ್ನತ ತಾಂತ್ರಿಕ ಕೊಡುಗೆ ನೀಡುವ ಮೂಲಕ ದೇಶದ ಹೆಸರು ಎಲ್ಲೆಲ್ಲೂ ರಾರಾಜಿಸುವಂತೆ ಮಾಡುವ ಕಾರ್ಯಕ್ರಮಗಳನ್ನು ಸದಾ ಹಮ್ಮಿಕೊಳ್ಳುತ್ತದೆ’ ಎಂದರು.

ಇದಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಸ್ಪರ್ಧೆ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ ಬಿಜಾಪೂರೆ, ಸದಸ್ಯರಾದ ಡಾ.ಕೈಲಾಷ ಪಾಟೀಲ, ಡಾ. ಅನಿಲ ಪಾಟೀಲ, ಪ್ರಾಚಾರ್ಯರಾದ ಡಾ.ಶಶಿಕಾಂತ .ಆರ್. ಮಿಸೆ, ಡಾ. ಕಲ್ಪನಾ ವಾಂಜೇರ್‌ಖೇಡ, ಡಾ. ಭಾರತಿ ಹರಸೂರು, ಪ್ರೊ. ರವೀಂದ್ರಕುಮಾರ ಲಠ್ಠೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.