ADVERTISEMENT

‘ಹಿಂದಿನ ತಪ್ಪು ತಿದ್ದಲು ಚಕ್ರತೀರ್ಥ ಸಮಿತಿ ರಚನೆ’–ಬಿ.ವಿ.ವಸಂತ ಕುಮಾರ್

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಬಿ.ವಿ.ವಸಂತ ಕುಮಾರ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 5:23 IST
Last Updated 13 ಜೂನ್ 2022, 5:23 IST
ಸಂವಾದದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಬಿ.ವಿ ವಸಂತ ಕುಮಾರ್ ಮಾತನಾಡಿದರು. ಛಲವಾದಿ ನಾರಾಯಣಸ್ವಾಮಿ, ಬಸವರಾಜ ದೇಶಮುಖ ಇದ್ದರು
ಸಂವಾದದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಬಿ.ವಿ ವಸಂತ ಕುಮಾರ್ ಮಾತನಾಡಿದರು. ಛಲವಾದಿ ನಾರಾಯಣಸ್ವಾಮಿ, ಬಸವರಾಜ ದೇಶಮುಖ ಇದ್ದರು   

ಕಲಬುರಗಿ: ‘ಈ ಹಿಂದಿನ ಪಠ್ಯಪುಸ್ತಕ ರಚನಾ ಹಾಗೂ ಪರಿಷ್ಕರಣ ಸಮಿತಿಗಳಿಗೆ ಬಂದಿದ್ದ ಆಕ್ಷೇಪಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಮರುಪರಿಷ್ಕರಣ ಸಮಿತಿ ರಚಿಸಿತ್ತು’ ಎಂದುಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಬಿ.ವಿ ವಸಂತ ಕುಮಾರ್ ಸ್ಪಷ್ಟಪಡಿಸಿದರು.

ಕಲಬುರಗಿ ವಿವೇಕ ವಿಚಾರ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಪಠ್ಯಪುಸ್ತಕ ಪರಿಷ್ಕರಣೆಯ ಸತ್ಯ–ಮಿಥ್ಯ ಕುರಿತ ವಿಚಾರ ಸಂಕಿರಣ ಮತ್ತು ಸಂವಾದದಲ್ಲಿ ಅವರು ಮಾತನಾಡಿದರು.

‘ಡಾ.ಜಿಎಸ್‌. ಮುಡಂಬಡಿತ್ತಾಯ ಮತ್ತು ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಗಳ ಪಠ್ಯಗಳ ವಿರುದ್ಧ ಅಪಸ್ವರಗಳು ಬಂದಾಗಲೇ ಎಚ್ಚೆತ್ತುಕೊಂಡು ಮರುಪರಿಶೀಲನೆ ಮಾಡಿದ್ದರೇ ಇವತ್ತು ಈ ವಿವಾದವೇ ಇರುತ್ತಿರಲಿಲ್ಲ. ಆರ್‌ಎಸ್‌ಎಸ್‌ ಬೆಂಬಲದ ಬಿಜೆಪಿ ಸರ್ಕಾರ ಪಠ್ಯಪುಸ್ತಕ ಮರುಪರಿಶೀಲಿಸಿದೆ ಎಂಬ ಒಂದೇ ಕಾರಣಕ್ಕೆ ವಿರೋಧ ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಮುಡಂಬಡಿತ್ತಾಯ ಸಮಿತಿಯಲ್ಲಿ ಆದ ತಪ್ಪುಗಳನ್ನು ಬರಗೂರರ ಸಮಿತಿ ಸರಿಪಡಿಸಲಿಲ್ಲ. ರೋಹಿತ್ ಚಕ್ರತೀರ್ಥ ಸಮಿತಿ ಆ ಕೆಲಸ ಮಾಡಿದೆ. ಶೇ 80ರಷ್ಟು ಪಠ್ಯವನ್ನು ಒಪ್ಪಿಕೊಳ್ಳಲಾಗಿದೆ. ಉಳಿದ ಭಾಗದ ಬಗ್ಗೆ ತಕರಾರು ಎತ್ತುವುದು ಸರಿಯಲ್ಲ. ಸಂವಿಧಾನದ ಆಸೆಯಗಳಿಗೆ ತಕ್ಕಂತೆ ಪಠ್ಯಗಳನ್ನು ಸೇರಿಸಲಾಗಿದೆ‘ ಎಂದು ಸಮಂಜಸ ನೀಡಿದರು.

‘ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ತನಗೆ ಬೇಕಾದ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿತ್ತು. ಈಗ ನಮ್ಮ ಸಮಯ ಬಂದಿದೆ. ನಾವು ನಮ್ಮ ಸಿದ್ಧಾಂತಗಳನ್ನು ಸೇರಿಸುತ್ತೇವೆ’ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸಮರ್ಥಿಸಿಕೊಂಡರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘ನಮ್ಮ ಭಾಗದ ವಿದ್ಯಾರ್ಥಿಗಳು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಶರಣಬಸವ ವಿಶ್ವವಿದ್ಯಾಲಯವುನೂತನ ಶಿಕ್ಷಣ ನೀತಿಯ ಮೂಲಕ ಆ ಕೊರತೆಯನ್ನು ನೀಗಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.